ಕಾರ್ಕಳ : ಶಾಲೆಗೆ ಹೋಗೋದು ವಿದ್ಯಾಭ್ಯಾಸಕ್ಕೆ ಬದಲು ಧರ್ಮ ಪ್ರಚಾರಕ್ಕೆ ಶಾಲೆಗೆ ಹೋಗುತ್ತಿಲ್ಲ ಎಂಬುದನ್ನು ವಿದ್ಯಾರ್ಥಿಗಳು ಅರ್ಥಮಾಡಿಕೊಳ್ಳಬೇಕು. ಯಾವುದೇ ಧರ್ಮವಾದರೂ ಶಾಲೆಗೆ ಹೋಗುವುದು ಧರ್ಮಪ್ರಚಾರಕ್ಕೆ ಅಲ್ಲ ಎನ್ನುವುದು ಗಮನದಲ್ಲಿರಬೇಕು. ನೀವು ನಿಮ್ಮ ಮನೆಯಲ್ಲಿ ಏನು ಬೇಕಾದರೂ ಮಾಡಿಕೊಳ್ಳಿ. ಆದರೆ ಶಾಲೆ-ಕಾಲೇಜಿಗೆ ಕೇವಲ ವಿದ್ಯೆ ಕಲಿಯಲು ಮಾತ್ರ ಹೋಗಿ ಎಂದು ಕಂದಾಯ ಸಚಿವ ಆರ್ ಅಶೋಕ್ ಅವರು ಹೇಳಿದ್ದಾರೆ.
ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಹಿಜಾಬ್ ಕುರಿತು ಪ್ರತಿಭಟನೆ ಮಾಡುತ್ತಿರುವುದು ವಿದ್ಯಾರ್ಥಿನಿಯರ ತಪ್ಪಿನಿಂದ ಅಲ್ಲ ಬದಲಾಗಿ ಇದರ ಹಿಂದೆ ಬಹಳಷ್ಟು ಜನ ಇದ್ದಾರೆ. ಈ ಹೋರಾಟದ ಹಿಂದೆ ವಿದೇಶಿ ಕೈವಾಡ ಷಡ್ಯಂತ್ರ ಇರುವ ಸಂಶಯ ಇದೆ. ಇಲ್ಲವಾದರೆ ಉಡುಪಿಯಲ್ಲಿ ಆರಂಭವಾದ ಹೋರಾಟ ಇಡೀ ಪ್ರಪಂಚಕ್ಕೆ ಹೋಗಿದ್ದು ಹೇಗೆ? ಇಷ್ಟು ಫಾಸ್ಟ್ ಆಗಿ ಇದರ ಹಿಂದೆ ಯಾರು ಕೆಲಸ ಮಾಡುತ್ತಿದ್ದಾರೆ? ಹಿಜಾಬ್ ಹೋರಾಟವನ್ನು ಮಕ್ಕಳು ಪ್ರಪಂಚಕ್ಕೆ ಹಬ್ಬಿಸಿದ್ರಾ? ಎಂದು ಪ್ರಶ್ನಿಸಿದರು.
ಹಿಜಾಬ್ ಹೋರಾಟದ ಹಿಂದೆ ಐಸಿಸ್ ಕೆಎಫ್ ಡಿ ಮತ್ತಿತರರ ಸಂಘಟನೆಗಳ ಕೈವಾಡ ಇದೆ. ಹಿಜಾಬ್ ಹೋರಾಟ ಮಾಡಿ ಎಂದು ಐಸಿಎಸ್ ಹೇಳಿಕೊಟ್ಟಿದೆ, ಮಕ್ಕಳು ಇರುವುದರಿಂದ ನಾವು ಹೆಚ್ಚು ಹಸ್ತಕ್ಷೇಪ ಮಾಡಲು ಆಗುವುದಿಲ್ಲ ನಾವು ಹಂತಹಂತವಾಗಿ ಸೂಕ್ತ ಕ್ರಮಗಳನ್ನು ತೆಗೆದುಕೊಳ್ಳುತ್ತೇವೆ. ಹಿಜಬ್ ಹೋರಾಟದ ಸಮಗ್ರ ತನಿಖೆ ಆಗಬೇಕಾಗಿದ್ದು, ಈ ಬಗ್ಗೆ ನಾನು ಮುಖ್ಯಮಂತ್ರಿಗಳ ಜೊತೆ ಮಾತನಾಡುತ್ತೇನೆ ಹೋರಾಟದ ಹಿಂದಿನ ದುರುಳರು ಭಯೋತ್ಪಾದಕರನ್ನು ಹೊರಗೆ ಎಳೆಯಬೇಕಾಗಿದೆ ಎಂದರು.










