ಚಿಕ್ಕಮಗಳೂರು : ಶಾಸಕ ಸಿ.ಟಿ.ರವಿ ಅವರ ಹುಟ್ಟುಹಬ್ಬವನ್ನು ಬಿಜೆಪಿ ಗ್ರಾಮಾಂತರ ಮಂಡಲದ ಪದಾಧಿಕಾರಿಗಳು ಮತ್ತು ಪಕ್ಷದ ಮುಖಂಡರು ತೊಗರಿಹಂಕಲ್ ಗ್ರಾ.ಪಂ ವ್ಯಾಪ್ತಿಯ ಗುಡ್ಡೇನಹಳ್ಳಿಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಇಂದು ಸಂಭ್ರಮದಿಂದ ಆಚರಿಸಿದರು.
ವಿದ್ಯಾರ್ಥಿಗಳಿಂದ ದೀಪ ಬೆಳಗಿಸಿ ಕೇಕ್ ಕತ್ತರಿಸುವ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಲಾಯಿತು, ಜನ್ಮ ದಿನದ ಪ್ರಯುಕ್ತ ವಿದ್ಯಾರ್ಥಿಗಳಿಗೆ ಯೋಗ ಮ್ಯಾಟ್ಗಳನ್ನು ಹಾಗೂ ಶಾಲೆಗೆ 24 ಕುರ್ಚಿ, 24 ಡೆಸ್ಕ್ ಗಳನ್ನು ನೀಡಲಾಯಿತು. ವಿದ್ಯಾರ್ಥಿಗಳಿಗೆ ಸಿಹಿ ಮತ್ತು ಉಪಹಾರ ವಿತರಿಸಲಾಯಿತು.
ಜಿ.ಪಂ. ಶಿಕ್ಷಣ ಮತ್ತು ಆರೋಗ್ಯ ಸ್ಥಾಯಿ ಸಮಿತಿ ಮಾಜಿ ಅಧ್ಯಕ್ಷೆ ಜೆಸಿಂತಾ ಅನಿಲ್ಕುಮಾರ್ ಮಾತನಾಡಿ ಪಕ್ಷದ ಹಿರಿಯ ನಾಯಕರಾದ ಶಾಸಕ ಸಿ.ಟಿ.ರವಿ ಅವರ ಹುಟ್ಟುಹಬ್ಬವನ್ನು ಆಚರಿಸುತ್ತಿರುವುದು ತಮಗೆ ಹೆಮ್ಮೆ ತಂದಿದೆ ಎಂದರು.
ಬಡತನದಲ್ಲಿ ಹುಟ್ಟಿ ಪರಿಶ್ರಮದಿಂದ ಹಂತ ಹಂತವಾಗಿ ಬೆಳೆದು ಹಿರಿಯ ನಾಯಕರಾಗಿರುವ ಶಾಸಕ ಸಿ.ಟಿ.ರವಿ ಅವರು ರಾಜ್ಯದ ಮುಖ್ಯಮಂತ್ರಿಗಳಾಗಲಿ ಎಂದು ಹಾರೈಸಿದರು.
ಬಿಜೆಪಿ ಜಿಲ್ಲಾ ವಕ್ತಾರ ಕೆ.ಆರ್.ಅನಿಲ್ ಕುಮಾರ್ ಮಾತನಾಡಿ ಶಾಸಕ ಸಿ.ಟಿ.ರವಿ ಅವರ ಸಾಧನೆಗಳು ಮತ್ತು ಅವರ ನಡೆ, ನುಡಿ ಎಲ್ಲರಿಗೂ ಮಾದರಿಯಾಗಬೇಕು ಎಂದು ಹೇಳಿದರು.
ಬಿಜೆಪಿ ಓಬಿಸಿ ಮೋರ್ಚಾ ಪ್ರಧಾನ ಕಾರ್ಯದರ್ಶಿ ಸಂತೋಷ್, ತಾ.ಪಂ. ಮಾಜಿ ಉಪಾಧ್ಯಕ್ಷ ವೈ.ಜಿ.ಸುರೇಶ್, ಗ್ರಾ.ಪಂ. ಮಾಜಿ ಅಧ್ಯಕ್ಷ ಹೊಸಪೇಟೆ ದೇವರಾಜ್ ಮಾತನಾಡಿದರು.
ಶಾಲಾಭಿವೃದ್ದಿ ಸಮಿತಿ ಅಧ್ಯಕ್ಷ ಸುರೇಶ್ ಅಧ್ಯಕ್ಷತೆ ವಹಿಸಿದ್ದರು, ಬಿಜೆಪಿ ಗ್ರಾಮಾಂತರ ಮಂಡಲ ಅಧ್ಯಕ್ಷ ಗೋಪಾಲ್, ಪ್ರಧಾನ ಕಾರ್ಯದರ್ಶಿ ಲೀಲಾ, ಮಹಿಳಾ ಮೋರ್ಚಾದ ಜಿಲ್ಲಾಧ್ಯಕ್ಷೆ ವೀಣಾ ಶೆಟ್ಟಿ, ಗ್ರಾ.ಪಂ. ಅಧ್ಯಕ್ಷೆ ವಿಮಲಾ, ಉಪಾಧ್ಯಕ್ಷ ವಿನೋದ್, ಯೋಗಶಿಕ್ಷಕಿ ಪವಿತ್ರ, ಮುಖ್ಯಶಿಕ್ಷಕಿ ಹೇಮಲತಾ, ಮಹಿಳಾ ಮಂಡಲದ ನಗರಾಧ್ಯಕ್ಷೆ ಶೋಭಾ ರಾಜೇಶ್ ಉಪಸ್ಥಿತರಿದ್ದರು.










