ಬೆಂಗಳೂರು : ನಿನ್ನೆ ಅರಮನೆ ಮೈದಾನದಲ್ಲಿ ಪುನೀತ್ ರಾಜ್ ಕುಮಾರ್ ನಟನೆಯ ಗಂಧದ ಗುಡಿ ಪ್ರಿ ರಿಲೀಸ್ ಇವೆಂಟ್ ‘ಪುನೀತ ಪರ್ವ’ ಕಾರ್ಯಕ್ರಮ ನಡೆದಿತ್ತು. ಕಾರ್ಯಕ್ರಮಕ್ಕೆ ಹೋಗಲು ಆಗದೇ ಮನೆಯಲ್ಲೆ ಕುಟುಂಬದ ಜೊತೆ ಟಿವಿಯಲ್ಲಿ ವೀಕ್ಷಿಸುತ್ತಾ ಕಣ್ಣೀರಿಟ್ಟಿದ್ದ ಅಪ್ಪು ಅಭಿಮಾನಿ ಹೃದಯಾಘಾತದಿಂದ ನಿಧನರಾಗಿದ್ದಾರೆ.
ಮಲ್ಲೇಶ್ವರನಲ್ಲಿರುವ ಅಪ್ಪು ಅಭಿಮಾನಿ ಗಿರಿರಾಜ್ ಮನೆಯಲ್ಲಿ ಟಿವಿ ಮೂಲಕ ಕಾರ್ಯಕ್ರಮ ವೀಕ್ಷಿಸಿದ್ದರು. ಗಿರಿರಾಜ್ ಅವರು ಆ ಕಾರ್ಯಕ್ರಮವನ್ನು ಟಿವಿಯಲ್ಲಿ ನೋಡುತ್ತ ಅತ್ತಿದ್ದಾರೆ. ಆಮೇಲೆ ಗಿರಿರಾಜ್ ಅವರು ರಾತ್ರಿ 10.30ಕ್ಕೆ ಶೌಚಾಲಯಕ್ಕೆ ಹೋದಾಗ ಕುಸಿದು ಬಿದ್ದಿದ್ದಾರೆ. ಅವರನ್ನು ಮಲ್ಲೇಶ್ವರದ ಕೆ.ಸಿ.ಜನರಲ್ ಆಸ್ಪತ್ರೆಗೆ ಕರೆದುಕೊಂಡು ಹೋಗುವಷ್ಟರಲ್ಲೇ ಪ್ರಾಣ ಬಿಟ್ಟಿದ್ದರು. ಗಿರಿರಾಜ್ ಗೆ ಹೃದಯಾಘಾತವಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ.
ಪುನೀತ್ ರಾಜ್ ಕುಮಾರ್ ಜೊತೆ ಗಿರಿರಾಜ್ ಅವರು ಕಾಫಿ ಕುಡಿದಿದ್ದರಂತೆ. ವಾಟ್ಸಾಪ್, ಪೇಸ್ಬುಕ್ನಲ್ಲಿ ಕೂಡ ಗಿರಿರಾಜ್ ಅವರು ಪುನೀತ್ ಜೊತೆಗಿನ ಫೋಟೋವನ್ನು ಅಪ್ ಲೋಡ್ ಮಾಡಿಕೊಂಡಿದ್ದಾರೆ. ಅಪ್ಪುವಿನ ಫೋಟೋಗೆ ಗಿರಿರಾಜ್ ಅವರು ಮುತ್ತಿನ ಹಾರ ಹಾಕಿದ್ದರಂತೆ. ಪ್ರೈವೇಟ್ ಬ್ಯಾಂಕ್ ನಲ್ಲಿ ಕೆಲಸ ಮಾಡುತ್ತಿದ್ದ ಗಿರಿರಾಜ್ ಕೇವಲ 29 ವಯಸ್ಸಿನಲ್ಲಿಯೇ ಮೃತಪಟ್ಟಿದ್ದು, ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.
ನನ್ನ ಮಗನಿಗೆ ಅಪ್ಪು ಅಂದರೆ ಪಂಚಪ್ರಾಣ. ನಿನ್ನೆ ಕಾರ್ಯಕ್ರಮ ನೋಡ್ತಾ ನೋಡ್ತಾ ಬಿಕ್ಕಿಬಿಕ್ಕಿ ಅಳೋಕೆ ಶುರು ಮಾಡಿದ. ಹುಟ್ಟಿದರೆ ಅಪ್ಪು ತರ ಇರಬೇಕು. ಬದುಕಿದರೆ ಅಪ್ಪು ತರಹ ಬದುಕಬೇಕು ಅಂತ ಸಾಕಷ್ಟು ಕಣ್ಣಿರು ಹಾಕಿದ್ದ. ಸಮಾಧಾನ ಮಾಡ್ಕೊ ಅಂತ ತುಂಬಾ ಹೇಳಿದ್ವಿ. ರಾತ್ರಿ ಶೌಚಾಲಯಕ್ಕೆ ಹೋಗಿದ್ದಾಗ ಕುಸಿದ ಬಿದ್ದ. ಸಮೀಪದ ಆಸ್ಪತ್ರೆಗೆ ಕೊಂಡೊಯ್ಯುವಷ್ಟರಲ್ಲಿ ಜೀವ ಹೋಗಿತ್ತು ಎಂದು ಮೃತನ ತಂದೆ ಬೇಸರ ವ್ಯಕ್ತಪಡಿಸಿದ್ದಾರೆ.










