ವಿಜಯಪುರ : ನಡೆದಾಡುವ ದೇವರು ಸಿದ್ದೇಶ್ವರ ಶ್ರೀಗಳು ನಿಧನರಾಗಿ ಮೂರು ದಿನಗಳೂ ಕಳೆದಿವೆ. ಇಂದು ಬ್ರಾಹ್ಮೀ ಮುಹೂರ್ತದಲ್ಲಿ ಜ್ಞಾನ ಯೋಗಾಶ್ರಮದ ಅಧ್ಯಕ್ಷ ಬಸವಲಿಂಗ ಶ್ರೀ ನೇತೃತ್ವದಲ್ಲಿ ಐದು ಮಡಿಕೆಗಳಲ್ಲಿ ಅಸ್ಥಿ ಸಂಗ್ರಹಿಸಲಾಗಿದೆ.
ಈ ಕುರಿತು ಮಾಹಿತಿ ನೀಡಿರುವ ಬಸವಲಿಂಗ ಶ್ರೀ, ಇಂದು ಮುಂಜಾನೆ ಬ್ರಾಹ್ಮೀ ಮುಹೂರ್ತದಲ್ಲಿ ಪೂಜ್ಯ ಗುರುದೇವರ ಚಿತಾಭಸ್ಮವನ್ನು ಅವರ ಇಚ್ಛೆಯಂತೆ ಸಂಗ್ರಹ ಮಾಡಿದ್ದೇವೆ. ರವಿವಾರ 8ರಂದು ಒಂದೇ ತಂಡದಿಂದ ತ್ರಿವೇಣಿ ಸಂಗಮ ಸುಕ್ಷೇತ್ರ ಕೂಡಲಸಂಗಮ ಮತ್ತು ಗೋಕರ್ಣದಲ್ಲಿ ವಿಧಿವಿಧಾನದಂತೆ ವಿಸರ್ಜನೆ ಮಾಡಲಾಗುವುದು. ನಾಳೆ ಹುಣ್ಣಿಮೆ ಇರುವುದರಿಂದ ಚಿತಾಭಸ್ಮ ವಿಸರ್ಜನೆ ಮಾಡಲಾಗುತ್ತಿಲ್ಲ. ರವಿವಾರ ಬೆಳಗ್ಗೆ 5 ಗಂಟೆಗೆ ಆಶ್ರಮದಿಂದ ಅಸ್ಥಿಯೊಂದಿಗೆ ಹೊರಡುತ್ತೇವೆ ಎಂದರು.
ಸಿದ್ದೇಶ್ವರ ಶ್ರೀಗಳ ಆಣತಿಯಂತೆ ನಾವು ಚಿತಾಭಸ್ಮವನ್ನು ಭಕ್ತರಿಗೆ ನೀಡುವುದಿಲ್ಲ. ಭಕ್ತರು ಬೇಕಾದರೆ ಹೊರಗಿನಿಂದ ವಿಭೂತಿ ತಂದು ಅಂತ್ಯಕ್ರಿಯೆ ನಡೆಸಿದ ಜಾಗದಲ್ಲಿಟ್ಟು ಅದನ್ನೇ ಭಸ್ಮವೆಂದು ಭಾವಿಸಿ ಒಯ್ಯಬೇಕು ಎಂದು ನಿನ್ನೆ ಬಸವಲಿಂಗ ಸ್ವಾಮೀಜಿ ಸ್ಪಷ್ಟನೆ ನೀಡಿದ್ದರು.










