ಬೆಂಗಳೂರು: ಸದನದಲ್ಲಿಂದು ಭಾಲ್ಕಿ ಶಾಸಕ ಈಶ್ವರ ಖಂಡ್ರೆ ವಿರುದ್ಧ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಕೆಂಡಾಮಂಡಲರಾದ ಘಟನೆ ನಡೆಯಿತು.
ಟಿಪ್ಪುವಿನಂತೆ ಸಿದ್ದರಾಮಯ್ಯ ಅವರನ್ನು ಹೊಡೆದು ಹಾಕಬೇಕು ಎನ್ನುವ ಅಶ್ವತ್ಥ್ ನಾರಾಯಣ್ ಹೇಳಿಕೆಗೆ ಪ್ರತಿಪಕ್ಷದ ಸದಸ್ಯರು ಕಲಾಪದ ವೇಳೆ ಪ್ರತಿಭಟನೆ ನಡೆಸಿದರು. ಇದೇ ವೇಳೆ ಶಾಸಕ ಈಶ್ವರ್ ಖಂಡ್ರೆ ಏರು ಧ್ವನಿಯಲ್ಲಿ ಮಾತನಾಡಿದರು. ಸ್ಪೀಕರ್ ಕುಳಿತುಕೊಳ್ಳಲು ಸೂಚಿಸಿದರೂ ಮಾತು ನಿಲ್ಲಿಸಲಿಲ್ಲ. ಇದರಿಂದ ಕೋಪಗೊಂಡ ಕಾಗೇರಿ, ಖಂಡ್ರೆ ಅವರನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡರು.
ನಿಮ್ಮನ್ನು ಯಾರು ಶಾಸಕರಾಗಿ ಆಯ್ಕೆ ಮಾಡಿದವರು? ನಿಮ್ಮಂಥವರು ಎಂಎಲ್ ಎ ಆಗಿರೋದು ಈ ವ್ಯವಸ್ಥೆಗೆ ಅಗೌರವ ಎಂದರು. ಇದಕ್ಕೆ ಉತ್ತರಿಸಿದ ಖಂಡ್ರೆ, ನಾನು ಅತಿಯಾಗಿ ನಡೆದುಕೊಂಡಿಲ್ಲ. ನೀವು ನನಗೆ ಮಾತನಾಡಲು ಅವಕಾಶ ಕೊಟ್ಟಿಲ್ಲ ಎಂದರು. ಮತ್ತಷ್ಟೂ ಅಸಮಾಧಾನಗೊಂಡ ಸ್ಪೀಕರ್ ಇನ್ನೊಂದು ಹೆಜ್ಜೆ ಮುಂದಾದರೆ ಹೊರಗಡೆ ಹಾಕಬೇಕಾಗುತ್ತೆ, ಹಾಕ್ಲಾ ಎಂದು ಎಚ್ಚರಿಕೆ ಕೊಟ್ಟರು. ನಂತರ ಸದನವನ್ನು ಮುಂದೂಡಿದರು.










