ಅಧಿಕಾರಕ್ಕೆ ಬಂದ್ರೆ ಬಿಪಿಎಲ್ ಕಾರ್ಡ್ ಹೊಂದಿರುವ ಪ್ರತಿಯೊಬ್ಬರಿಗೂ 10 ಕೆ.ಜಿ ಅಕ್ಕಿ : ಕಾಂಗ್ರೆಸ್ ಘೋಷಣೆ…

71
firstsuddi

ಬೆಂಗಳೂರು : ನಾವು ಅಧಿಕಾರಕ್ಕೆ ಬಂದ ಮೊದಲ ತಿಂಗಳಿನಿಂದಲೇ ಬಿಪಿಎಲ್ ಕಾರ್ಡ್ ಹೊಂದಿರುವ ಪ್ರತಿಯೊಬ್ಬರಿಗೂ 10 ಕೆ.ಜಿ ಅಕ್ಕಿ ಕೊಡುತ್ತೇವೆ ಎಂದು ಕಾಂಗ್ರೆಸ್ ಘೋಷಣೆ ಮಾಡಿದೆ. ನಗರದಲ್ಲಿ ಇಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಜಂಟಿ ಪತ್ರಿಕಾಗೋಷ್ಠಿ ನಡೆಸಿದರು.

ಈ ವೇಳೆ ಮಾತನಾಡಿದ ಡಿಕೆಶಿ, ಇವತ್ತು ಬಹಳ ಪವಿತ್ರವಾದ ದಿನ. ವಿಧಾನಸಭೆ ಅಧಿವೇಶನ ಕೂಡ ಮುಗಿಯುತ್ತಿದೆ. ಬಿಜೆಪಿಯ ಕೊನೆಯ ದಿನಕ್ಕೆ ಈ ದಿನ ಕೂಡ ಸಾಕ್ಷಿಯಾಗಲಿದೆ. ಈಗಾಗಲೇ ಎರಡು ಗ್ಯಾರಂಟಿ ಘೋಷಣೆ ಮಾಡಿದ್ದೇವೆ. ಗೃಹಲಕ್ಷ್ಮಿ ಹಾಗೂ ಗೃಹ ಜ್ಯೋತಿ ಯೋಜನೆ ಘೋಷಣೆ ಮಾಡಿದ್ದೇವೆ. ನಮ್ಮ ತುರ್ತು ಪತ್ರಿಕಾಗೋಷ್ಠಿಯ ಮೂರನೇ ಘೋಷಣೆ ಅಂದರೆ ಅನ್ನ ಭಾಗ್ಯದ ಅಕ್ಕಿ 7 ಕೆ.ಜಿಯಿಂದ 5 ಕೆ.ಜಿಗೆ ಇಳಿಸಿದ್ದಾರೆ. ಆದ್ದರಿಂದ ಮೂರನೇ ಗ್ಯಾರಂಟಿ ಪ್ರಕಟಿಸುತ್ತಿದ್ದೇವೆ. ಬಿಪಿಎಲ್ ಕಾರ್ಡ್ ಹೊಂದಿರುವವರಿಗೆ 10 ಕೆ.ಜಿ ಅಕ್ಕಿ ಕೊಡುತ್ತೇವೆ ಎಂದು ತಿಳಿಸಿದರು.

ಇದೇ ವೇಳೆ ಸಿದ್ದರಾಮಯ್ಯ ಮಾತನಾಡಿ, ನಾವು ಅಧಿಕಾರಕ್ಕೆ ಬಂದ ಮೊದಲ ತಿಂಗಳಿನಿಂದ ಬಿಪಿಎಲ್ ಕಾರ್ಡ್ ಹೊಂದಿರುವ ಪ್ರತಿಯೊಬ್ಬರಿಗೆ 10 ಕೆ.ಜಿ ಕೊಡುತ್ತೇವೆ. ನಮಗೆ ಕೇಂದ್ರದಿಂದ 3 ರೂಪಾಯಿಗೆ ಕೆ.ಜಿ ಅಕ್ಕಿ ಸಿಗುತ್ತದೆ. ಈಗ 4-5 ಸಾವಿರ ಕೋಟಿ ಅಕ್ಕಿಗೆ ಖರ್ಚಾಗುತ್ತಿದೆ. ಮುಂದೆ ನಾವು 10 ಕೆ.ಜಿ ಕೊಟ್ಟರೆ 3-4 ಸಾವಿರ ಕೋಟಿ ಹೆಚ್ಚುವರಿ ಖರ್ಚು ಮಾಡಬೇಕಾಗಬಹುದು ಎಂದರು.

ಏಳು ಕೆ.ಜಿ ಅಕ್ಕಿ ಉಚಿತವಾಗಿ ಕೊಡಲು ತೀರ್ಮಾನ ಮಾಡಿದ್ವಿ. ಬಿಜೆಪಿಯವರು 7 ರಿಂದ 5ಕ್ಕೆ ಇಳಿಸಿದ್ರು. ನಾನು ಅಸೆಂಬ್ಲಿಯಲ್ಲೂ ಮಾತಾಡಿದ್ದೆ. ಬಡವರು, ಕೂಲಿಕಾರ್ಮಿಕರಿಗೆ ಕೋವಿಡ್ ಸಂದರ್ಭದಲ್ಲಿ ತುಂಬಾ ಅನುಕೂಲ ಆಯ್ತು. ದುಡ್ಡಿನ ಕೊರತೆ ನೆಪ ಒಡ್ಡಿ ಕಡಿಮೆ ಮಾಡಿದ್ರು. ಬೆಲೆ ಏರಿಕೆಯಿಂದ ಎಲ್ಲಾ ಗಗನಕ್ಕೆ ಹೋಗಿದೆ. ಹಸಿದವರಿಗೆ ಊಟ ಕೊಡೋದು ಸರ್ಕಾರದ ಕರ್ತವ್ಯ ಎಂದು ತಿಳಿಸಿದರು.

ಗ್ಯಾರೆಂಟಿ ಕಾರ್ಡ್ ಗಳಿಗೆ ನಾನು, ಡಿಕೆಶಿ ಇಬ್ರೂ ಸೈನ್ ಮಾಡಿದ್ದೀವಿ. ಎಲ್ಲಾ ಮನೆ ಮನೆಗಳಿಗೂ ಕಾರ್ಡ್ ಗಳನ್ನ ಹಂಚ್ತಾ ಇದ್ದೀವಿ. ನಾವು ಹಿಂದೆ ಮಾತು ಕೊಟ್ಟಂತೆ ನಡೆದುಕೊಂಡಿದ್ದೇವೆ. ಕೇಂದ್ರ ಸರ್ಕಾರ ಮೂರು ರೂಪಾಯಿಗೆ ಕೊಡುತ್ತೆ. ನಾವು ಖರೀದಿ ಮಾಡಿ ಉಚಿತವಾಗಿ ಕೊಡ್ತೀವಿ. ಇದು ಕೇಂದ್ರ ಸರ್ಕಾರದ ಯೋಜನೆ ಅಂತಾ ಬೊಮ್ಮಾಯಿ ಸುಳ್ಳು ಹೇಳ್ತಿದ್ದಾರೆ. ಬಸವರಾಜ ಬೊಮ್ಮಾಯಿಯನ್ನ ಸುಳ್ಳು ಹೇಳೋಕೆ ಅಂತಾನೆ ಆರ್ ಎಸ್ ಎಸ್ ನವರು ಆಯ್ಕೆ ಮಾಡಿದ್ದಾರೆ ಎಂದರು.