ದಾವಣಗೆರೆ: ಪತ್ನಿಯೊಬ್ಬಳು ತನ್ನ ಪ್ರಿಯಕರನ ಜೊತೆ ಸೇರಿಕೊಂಡು ಪತಿಯನ್ನೇ ಕೊಲೆ ಮಾಡಿರುವಂತಹ ಘಟನೆ ಜಿಲ್ಲೆಯ ಹಳೇ ಬಿಸಲೇರಿ ಗ್ರಾಮದಲ್ಲಿ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ.
ಕೊಲೆ ಆರೋಪಿ ಕಾವ್ಯಾ, ಆಕೆಯ ಪ್ರಿಯಕರ ಬೀರೇಶ್ನನ್ನು ಪೊಲೀಸರು ಬಂಧಿಸಿದ್ದಾರೆ. ಕೊಲೆಯಾದ ವ್ಯಕ್ತಿ ಲಿಂಗರಾಜ್ (24) ಕಾವ್ಯಾಳ ಪತಿ.
ಮನೆಯ ಮೇಲಿಂದ ಬಿದ್ದು, ಪತಿ ಸಾವನ್ನಪ್ಪಿದ್ದಾನೆ ಎಂದು ಪತ್ನಿ ಕಾವ್ಯ ಕಥೆ ಕಟ್ಟಿ ಕೊಲೆ ಮುಚ್ಚಿ ಹಾಕಲು ಯತ್ನಿಸಿದ್ದಳು. ಅನುಮಾನಾಸ್ಪದ ಸಾವಿನ ಪ್ರಕರಣ ಬೆನ್ನತ್ತಿದ್ದ ಪೊಲೀಸರು ಸತ್ಯ ಬಯಲಿಗೆಳೆದು ಕಾವ್ಯಾ ಹಾಗೂ ಆಕೆಯ ಪ್ರಿಯಕರನನ್ನು ಬಂಧಿಸಿದ್ದಾರೆ.
ಮೃತ ಲಿಂಗರಾಜ್ ಪತ್ನಿ ಕಾವ್ಯಾಗೆ ಬೀರೇಶ್ ಜೊತೆಗೆ ಅನೈತಿಕ ಸಂಬಂಧವಿತ್ತು. ಈ ಹಿಂದೆ ಇಬ್ಬರೂ ಮಂಗಳೂರಿಗೆ ಓಡಿ ಹೋಗಿದ್ದರು. ನಂತರ ಕಾವ್ಯಾಳನ್ನು ಕರೆತಂದು ರಾಜಿ ಸಂಧಾನದ ಮೂಲಕ ಗಂಡನೊಂದಿಗೆ ಬಿಟ್ಟಿದ್ದರು. ಆದರೆ ಕಾವ್ಯಾಗೆ ಇಷ್ಟವಿಲ್ಲದಿದ್ದರಿಂದ ಗಂಡನನ್ನೇ ಮುಗಿಸಲು ಸ್ಕೆಚ್ ಹಾಕಿದ್ದಳು. ಆಕೆ ತನ್ನ ಪ್ರಿಯಕರ ಬೀರೇಶ್ ಜೊತೆ ಸೇರಿ ತಲೆಗೆ ಕಬ್ಬಿಣದ ಆಯುಧದಿಂದ ಹೊಡೆದು ಕೊಲೆ ಮಾಡಿ, ನಂತರ ಆಕಸ್ಮಿಕ ಸಾವು ಎಂದು ಬಿಂಬಿಸಿದ್ದಳು.
ಲಿಂಗರಾಜ್ ತಾಯಿ ಅನುಮಾನಗೊಂಡು ಪೊಲೀಸ್ ಠಾಣೆಯಲ್ಲಿ ಕಾವ್ಯಾಳ ವಿರುದ್ಧ ದೂರು ದಾಖಲಿಸಿದ್ದರು. ಈ ಸಂಬಂಧ ಕೇಸ್ ದಾಖಲಿಸಿಕೊಂಡು ತನಿಖೆ ನಡೆಸಿದಾಗ ಸತ್ಯ ಬಯಲಾಗಿದೆ. ಆರೋಪಿಗಳಿಬ್ಬರು ಕೊಲೆ ಮಾಡಿರುವುದಾಗಿ ಒಪ್ಪಿಕೊಂಡ ನಂತರ ಕಾವ್ಯ ಹಾಗೂ ಪ್ರಿಯಕರ ಬೀರೇಶ್ನನ್ನು ಪೊಲೀಸರು ಬಂಧಿಸಿದ್ದಾರೆ.