ದಾವಣಗೆರೆ: ಕಾಂಪೌಂಡ್ನಿಂದ ಜಾರಿ ಬಿದ್ದು ವಿದ್ಯಾರ್ಥಿನಿ ಸಾವನ್ನಪ್ಪಿರುವ ಘಟನೆ ಜಿಲ್ಲೆಯ ಹರಿಹರ ತಾಲೂಕಿನ ಕುರುಬರಹಳ್ಳಿ ಸಮೀಪದ ಮಾನ್ಯತಾ ಪಬ್ಲಿಕ್ ವಸತಿ ಕಾಲೇಜ್ನಲ್ಲಿ ನಡೆದಿದೆ.
ಸಿನಿಕ್ಷಾ(16) ಮೃತ ವಿದ್ಯಾರ್ಥಿನಿ. ವಿಜಯನಗರ ಜಿಲ್ಲೆಯ ಹರಪ್ಪನಹಳ್ಳಿ ಪಟ್ಟಣದ ಶಶಿಕಾಂತ್ ದಂಪತಿಯ ಪುತ್ರಿಯಾದ ಈಕೆ ಕಳೆದ ನಾಲ್ಕು ದಿನಗಳ ಹಿಂದಷ್ಟೇ ಮಾನ್ಯತಾ ವಸತಿ ಕಾಲೇಜ್ನಲ್ಲಿ ಸೈನ್ಸ್ ವಿಭಾಗದ ಪಿಯು ಪ್ರಥಮ ವರ್ಷಕ್ಕೆ ಪ್ರವೇಶ ಪಡೆದಿದ್ದಳು.
ಘಟನೆಯಿಂದ ತೀವ್ರ ಗಾಯಗೊಂಡಿದ್ದ ಸಿನಿಕ್ಷಾಳನ್ನು ಜಿಲ್ಲೆಯ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಬೆಳಗ್ಗಿನ ಜಾವ ಸಾವನ್ನಪ್ಪಿದ್ದಾಳೆ. ವಿದ್ಯಾರ್ಥಿನಿ ರಾತ್ರಿಯ ವೇಳೆ ಕಾಂಪೌಂಡ್ ಯಾಕೆ ಏರಿದಳು ಎನ್ನುವುದರ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ಘಟನೆ ಸಂಬಂಧ ಹರಿಹರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.










