ಚಿಕ್ಕಮಗಳೂರು: ಶಿಕ್ಷಕ ಸಮುದಾಯದಿಂದ ಮಾತ್ರ ದೇಶದ ಅಭಿವೃದ್ಧಿ ಸಾಧ್ಯವಾಗುತ್ತದೆ ಎಂದು ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಜಗದೀಶಾಚಾರ್ ಹೇಳಿದರು.
ಭಾರತ ಸೇವಾದಳದ ತಾಲೂಕು ಸಮಿತಿ ಮತ್ತು ಸಮಾನ ಮನಸ್ಕರ ವೇದಿಕೆ ನಗರದ ಸೇವಾದಳ ಕಚೇರಿಯಲ್ಲಿ ನಿನ್ನೆ ಏರ್ಪಡಿಸಿದ್ದ ನಿವೃತ್ತ ಶಿಕ್ಷಕರಿಗೆ ಬೀಳ್ಕೊಡುಗೆ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಕೇವಲ ಕಟ್ಟಡಗಳನ್ನು ಕಟ್ಟಿದರೆ ರಾಷ್ಟ್ರದ ಅಭಿವೃದ್ಧಿಯಾಗುವುದಿಲ್ಲ, ದೇಶ ಪ್ರಗತಿ ಸಾಧಿಸಬೇಕಾದರೆ ಜನತೆ ಶಿಕ್ಷಣವಂತರಾಗಬೇಕು. ಆ ನಿಟ್ಟಿನಲ್ಲಿ ಜನರನ್ನು ಸಾಕ್ಷರರನ್ನಾಗಿಸುವ ಕೆಲಸವನ್ನು ಶಿಕ್ಷಕ ಸಮುದಾಯ ಮಾಡಬೇಕು ಎಂದು ಸಲಹೆ ಮಾಡಿದರು.
ಭಾರತ ಸೇವಾದಳದ ತಾಲೂಕು ಸಂಘಟಕ ಎಸ್.ಇ. ಲೋಕೇಶ್ವರಾಚಾರ್ ಮಾತನಾಡಿ, ಸಾಕ್ಷರತೆ ಸಾಧಿಸದ ದೇಶಗಳು ಯಾವುದೇ ಕಾರಣಕ್ಕೂ ಅಭಿವೃದ್ಧಿಯಾಗುವುದಿಲ್ಲ ಎಂದರು.
ಶಿಕ್ಷಕರು ಇಂದಿನ ಪೀಳಿಗೆಯನ್ನು ಸಾಕ್ಷರರನ್ನಾಗಿಸುವುದರ ಜೊತೆಗೆ ಸಂಸ್ಕಾರವಂತರನ್ನಾಗಿಯೂ ಮಾಡಬೇಕು ಎಂದು ಸಲಹೆ ಮಾಡಿದರು.
ಸೇವೆಯಿಂದ ನಿವೃತ್ತರಾದ ಸಂಗಮೇಶ್ವರ ಪೇಟೆ ಶಾಲೆಯ ಶಿಕ್ಷಕ ಪರಮಶಿವ, ಮಾಚಗೊಂಡನಹಳ್ಳಿ ಶಾಲೆಯ ಶಿಕ್ಷಕ ಪಿ. ಗಿರೀಶ್ ಹಾಗೂ ಅಂಬಳೆ ಶಾಲೆಯ ಶಿಕ್ಷಕ ಶೇಖರಪ್ಪ ಅವರನ್ನು ಸಮಾರಂಭದಲ್ಲಿ ಸನ್ಮಾನಿಸಿ ಬೀಳ್ಕೊಡಲಾಯಿತು.
ಭಾರತ ಸೇವಾದಳದ ತಾಲೂಕು ಉಪಾಧ್ಯಕ್ಷರಾದ ಕಾಳಯ್ಯ, ಎಸ್.ಎಂ. ಮಹೇಶಪ್ಪ, ಜಿಲ್ಲಾ ದೈಹಿಕ ಶಿಕ್ಷಕರ ಸಂಘದ ಮಾಜಿ ಅಧ್ಯಕ್ಷ ಹೆಚ್.ಕೆ. ಗೋವಿಂದೇಗೌಡ, ಸೋಮಶೇಖರ್, ಸುಭದ್ರಮ್ಮ ಉಪಸ್ಥಿತರಿದ್ದರು.










