ಚಿಕ್ಕಮಗಳೂರು: ಜನರು ಕಾಲ ಕಾಲಕ್ಕೆ ಆರೋಗ್ಯ ತಪಾಸಣೆಗೆ ಒಳಗಾಗುವುದರಿಂದ ಅನೇಕ ರೋಗಗಳಿಂದ ದೂರವಿರಬಹುದು ಎಂದು ಹೃದಯ ತಜ್ಞ ಡಾ.ಅನಿಕೇತ್ ವಿಜಯ್ ಹೇಳಿದರು.
ಆಶ್ರಯ ಮಲ್ಟಿ ಸ್ಪೆಷಾಲಿಟಿ ಮತ್ತು ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಹಾಗೂ ಆಶ್ರಯ ಹೃದಯ ಸಂಸ್ಥೆ ಕಡೂರು ತಾಲೂಕಿನ ಸಖರಾಯಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ನಿನ್ನೆ ಆಯೋಜಿಸಿದ್ದ ಉಚಿತ ಆರೋಗ್ಯ ತಪಾಸಣಾ ಶಿಬಿರವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಇತೀಚಿನ ವರ್ಷಗಳಲ್ಲಿ ಹೃದ್ರೋಗ ಸಮಸ್ಯೆಗಳು ಯುವಜನತೆ ಮತ್ತು ಮಕ್ಕಳನ್ನು ಹೆಚ್ಚು ಕಾಡುತ್ತಿವೆ. ಹಾಗಾಗಿ ಹೃದಯ ಸಂಬಂಧಿ ರೋಗಳನ್ನು ಯಾವುದೆ ಕಾರಣಕ್ಕೂ ನಿರ್ಲಕ್ಷ್ಯ ಮಾಡಬಾರದು. ಸರಿಯಾದ ಸಮಯಕ್ಕೆ ತಪಾಸಣೆಗೆ ಒಳಗಾಗುವುದರಿಂದ ಮುಂದೆ ಸಂಭವಿಸಬಹುದಾದ ದೊಡ್ಡ ಅನಾಹುತವನ್ನು ತಪ್ಪಿಸಬಹುದು ಎಂದು ತಿಳಿಸಿದರು.
ಪ್ರಾಸ್ತಾವಿಕವಾಗಿ ಮಾತನಾಡಿದ ಪುರುಷೋತ್ತಮ್, ಆಧುನಿಕ ಜೀವನ ಪದ್ಧತಿಯಿಂದಾಗಿ ಇಂದು ಕಂಡು ಕೇಳರಿಯದ ರೋಗಗಳು ಮನುಕುಲವನ್ನು ಕಾಡುತ್ತಿವೆ. ಜೀವನ ಪದ್ಧತಿಯನ್ನು ಬದಲಾಯಿಸಿಕೊಳ್ಳುವುದರಿಂದ ಆರೋಗ್ಯವಂತರಾಗಿ ಬದುಕಲು ಸಾಧ್ಯವಾಗುತ್ತದೆ ಎಂದರು.
ಬೆಳಿಗ್ಗೆಯಿಂದ ಮಧ್ಯಾಹ್ನದವರೆಗೆ ನಡೆದ ಶಿಬಿರದಲ್ಲಿ ಆಶ್ರಯ ಆಸ್ಪತ್ರೆಯ ತಜ್ಞ ವೈದ್ಯರಾದ ಡಾ. ಅನಿಕೇತ್ ವಿಜಯ್, ಡಾ.ಅಶ್ವಿನಿ ಅನಿಕೇತ್, ಡಾ.ಕಾರ್ತಿಕ್ ವಿಜಯ್, ಡಾ.ಭಾಗ್ಯ ಕಾರ್ತಿಕ್, ಡಾ.ಶ್ರೀರಾಮ್, ಡಾ.ನಿಸರ್ಗ ಪಾಲ್ಗೊಂಡು 200ಕ್ಕೂ ಹೆಚ್ಚು ಗ್ರಾಮಸ್ಥರ ಆರೋಗ್ಯ ತಪಾಸಣೆ ಮಾಡಿದರು.
ರಕ್ತದೊತ್ತಡ, ಸಕ್ಕರೆ ಕಾಯಿಲೆ, ಹೃದಯರೋಗ, ಸ್ತ್ರೀರೋಗ, ಮಕ್ಕಳ ಆರೋಗ್ಯ ಸೇರಿದಂತೆ ವಿವಿಧ ರೋಗಗಳ ತಪಾಸಣೆ ನಡೆಸುವುದರ ಜೊತೆಗೆ ಉಚಿತವಾಗಿ ಔಷಧಿಗಳನ್ನು ವಿತರಿಸಲಾಯಿತು.
ಕಾಲೇಜಿನ ಪ್ರಾಂಶುಪಾಲ ವೆಂಕಟೇಶ್, ಗ್ರಾಮ ಪಂಚಾಯತಿ ಅಧ್ಯಕ್ಷೆ ಶಕುಂತಲಾ ಪ್ರಕಾಶ್, ಆಶ್ರಯ ಆಸ್ಪತ್ರೆಯ ಆಹಾರ ತಜ್ಞೆ ಅನುಷಾ, ನರ್ಸಿಂಗ್ ಅಧೀಕ್ಷಕ ಲೋಕೇಶ್, ಸಹ ಸಂಯೋಜಕ ಯಶವಂತ್, ಸಾರ್ವಜನಿಕ ಸಂಪರ್ಕಾಧಿಕಾರಿ ಗೆರ್ವಿನ್ ಡಯಾಸ್, ಸತೀಶ್ ಹಾಜರಿದ್ದರು.










