ಚಿಕ್ಕಮಗಳೂರು: ಅಧಿಕಾರಾವಧಿಯಲ್ಲಿ ಪ್ರಾಮಾಣಿಕವಾಗಿ ಕಾರ್ಯನಿರ್ವಹಿಸಿದವರು ಮಾತ್ರ ಜನರ ಮನಸ್ಸಿನಲ್ಲಿ ಶಾಶ್ವತವಾಗಿ ಉಳಿಯುತ್ತಾರೆ ಎಂದು ಶಾಸಕ ಎಚ್.ಡಿ.ತಮ್ಮಯ್ಯ ಹೇಳಿದರು.
ನಗರದ ಕೆಪಿಟಿಸಿಎಲ್ ಸಮುದಾಯ ಭವನದಲ್ಲಿ ನಿನ್ನೆ ನಡೆದ ಸೇವೆಯಿಂದ ನಿವೃತ್ತರಾದ ಡಿ.ಎ.ಸಿ.ಜಿ ಸರ್ಕಾರಿ ಪಾಲಿಟೆಕ್ನಿಕ್ನ ಪ್ರಾಂಶುಪಾಲ ಡಿ.ಆರ್.ಓಂಕಾರಸ್ವಾಮಿ ಅವರ ಬೀಳ್ಕೊಡುಗೆ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಸರ್ಕಾರಿ ನೌಕರರಿಗೆ ವರ್ಗಾವಣೆ ಮತ್ತು ನಿವೃತ್ತಿ ಸದಾ ಬೆನ್ನ ಹಿಂದೆಯೇ ಇರುತ್ತದೆ. ಅವೆರಡರ ನಡುವೆ ಜನರ ಸಮಸ್ಯೆಗಳಿಗೆ ಸ್ಪಂದಿಸಿದವರು ಮತ್ತು ಪ್ರಾಮಾಣಿವಾಗಿ ಕೆಲಸ ಮಾಡಿದವರು ಮಾತ್ರ ಸದಾ ನೆನಪಿನಲ್ಲಿ ಉಳಿಯುತ್ತಾರೆ ಎಂದರು.
ಓಂಕಾರಸ್ವಾಮಿ ಅವರು ಪಾಲಿಟೆಕ್ನಿಕ್ ಅಭಿವೃದ್ಧಿಗೆ ದುಡಿದಿದ್ದಾರೆ. ಅಧಿಕಾರಿಗಳು ರಾಜಕಾರಣಿಗಳ ಮನವೊಲಿಸಿ, ಕೋಟ್ಯಾಂತರ ರೂ. ಅನುದಾನ ತಂದು ಮೂಲಭೂತ ಸೌಲಭ್ಯಗಳನ್ನು ಒದಗಿಸಿದ್ದಾರೆ. ಧಾರ್ಮಿಕ ಮತ್ತು ಸಾಮಾಜಿಕ ಸೇವಾ ಕಾರ್ಯಗಳಲ್ಲೂ ತಮ್ಮನ್ನು ತೊಡಗಿಸಿಕೊಂಡಿದ್ದಾರೆ ಎಂದು ಶ್ಲಾಘಿಸಿದರು.
ವಿಧಾನ ಪರಿಷತ್ ಮಾಜಿ ಸದಸ್ಯ ಗಾಯತ್ರಿ ಶಾಂತೇಗೌಡ ಮಾತನಾಡಿ, ಸದಾ ಕ್ರಿಯಾಶೀಲರಾಗಿದ್ದ ಓಂಕಾರಸ್ವಾಮಿಯವರು ಅರ್ಪಣಾ ಮನೋಭಾವದಿಂದ ವಿದ್ಯಾರ್ಥಿಗಳ ಏಳಿಗೆಗಾಗಿ ದುಡಿದಿದ್ದಾರೆ. ಸಾವಿರಾರು ಮಕ್ಕಳ ಭವಿಷ್ಯ ರೂಪಿಸಿದ್ದಾರೆ ಎಂದು ಹೇಳಿದರು.
ಸರ್ಕಾರಿ ನೌಕರರ ಸಂಘದ ಜಿಲ್ಲಾಧ್ಯಕ್ಷ ದೇವೇಂದ್ರ ಮಾತನಾಡಿ, ಓಂಕಾರ ಸ್ವಾಮಿ ಅವರ ಕಾರ್ಯಕ್ಷಮತೆಯಿಂದಾಗಿ ಸರ್ಕಾರಿ ಪಾಲಿಟೆಕ್ನಿಕ್ ಇಂದು ಸುಸಜ್ಜಿತವಾಗಿದೆ. ಸರ್ಕಾರಿ ನೌಕರರ ಸಂಘದ ಕಟ್ಟಡಕ್ಕೂ ಸಹ ಅವರು ಒಂದು ಲಕ್ಷ ರೂ. ದೇಣಿಗೆ ನೀಡಿದ್ದಾರೆ ಎಂದು ಶ್ಲಾಘಿಸಿದರು.
ಇದೇ ವೇಳೆ ಪಾಲಿಟೆಕ್ನಿಕ್ನ ಹಳೆಯ ಮತ್ತು ಇಂದಿನ ವಿದ್ಯಾರ್ಥಿಗಳು ಓಂಕಾರಸ್ವಾಮಿ ಅವರಿಗೆ ಗುರುವಂದನೆ ಸಲ್ಲಿಸಿದರು. ವಿದ್ಯಾರ್ಥಿಗಳು ಮತ್ತು ಪಾಲಿಟೆಕ್ನಿಕ್ ವತಿಯಿಂದ ಓಂಕಾರಸ್ವಾಮಿ ದಂಪತಿಯನ್ನು ಸನ್ಮಾನಿಸಿ ಹೃದಯಸ್ಪರ್ಶಿ ಬೀಳ್ಕೊಡುಗೆ ನೀಡಲಾಯಿತು.
ಜಿಲ್ಲಾ ಸರ್ಕಾರಿ ನೌಕರರ ಸಂಘ ಸೇರಿದಂತೆ ವಿವಿಧ ಸಂಘ ಸಂಸ್ಥೆಗಳ ಮುಖಂಡರು ಓಂಕಾರಸ್ವಾಮಿ ಅವರನ್ನು ಸನ್ಮಾನಿಸಿದರು.
ಸನ್ಮಾನ ಸ್ವೀಕರಿಸಿ ಮಾತನಾಡಿದ ಓಂಕಾರಸ್ವಾಮಿ, ಅಧಿಕಾರಾವಧಿಯಲ್ಲಿ ತಾವು ಸಲ್ಲಿಸಿದ ಸೇವೆ ತಮಗೆ ಅತ್ಯಂತ ತೃಪ್ತಿ ಮತ್ತು ಹೆಮ್ಮೆ ತಂದಿದೆ ಎಂದರು. ಅಧಿಕಾರಾವಧಿಯಲ್ಲಿ ಸಹಕರಿಸಿದವರಿಗೆ ಕೃತಜ್ಞತೆ ಸಲ್ಲಿಸಿದರು.
ವಿದ್ಯಾರ್ಥಿಗಳು ಸಿದ್ಧಪಡಿಸಿದ ಓಂಕಾರಸ್ವಾಮಿ ಅವರ ವೃತ್ತಿಜೀವನದ ಸಾಕ್ಷ್ಯಚಿತ್ರವನ್ನು ಕಾರ್ಯಕ್ರಮದಲ್ಲಿ ಪ್ರದರ್ಶಿಸಲಾಯಿತು.
ನಿವೃತ್ತ ಪ್ರಾಂಶುಪಾಲ ಚಿದಂಬರ್, ಮೆಸ್ಕಾಂ ಇಲಾಖೆಯ ನಿವೃತ್ತ ಕಾರ್ಯಪಾಲಕ ಅಭಿಯಂತ ಸಿದ್ದಲಿಂಗಪ್ಪ, ಎ.ಬಿ.ಸುದರ್ಶನ್, ಓಂಕಾರಸ್ವಾಮಿ ಅವರ ಪತ್ನಿ ಸುಜಾತ ಉಪಸ್ಥಿತರಿದ್ದರು.










