ಮಂಡ್ಯ: ಪ್ರೀತಿಸಿ ಮದ್ವೆಯಾಗಿದ್ದ ಗೃಹಿಣಿಯೊಬ್ಬಳು ಅನುಮಾನಾಸ್ಪದವಾಗಿ ಸಾವನ್ನಪ್ಪಿರುವ ಘಟನೆ ಜಿಲ್ಲೆಯ ಶ್ರೀರಂಗಪಟ್ಟಣ ತಾಲ್ಲೂಕಿನ ಬೆಳಗೊಳ ಗ್ರಾಮದಲ್ಲಿ ನಡೆದಿದೆ.
ಮೈಸೂರಿನ ದರ್ಶಿನಿ (21) ಮೃತ ದುರ್ದೈವಿ. ಪತ್ನಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾಗಿ ಈಕೆಯ ಪತಿ ಸೂರ್ಯ ಹೇಳಿದ್ದಾನೆ. ಕೆ.ಆರ್.ಆಸ್ಪತ್ರೆಗೆ ದರ್ಶಿನಿಯನ್ನು ದಾಖಲಿಸಿ ಬಳಿಕ ಪತ್ನಿಯ ಪೋಷಕರಿಗೆ ವಿಷಯ ತಿಳಿಸಿದ್ದಾನೆ. ಆದರೆ ಅಷ್ಟರಲ್ಲಾಗಲೇ ಆಕೆ ಸಾವನ್ನಪ್ಪಿದ್ದಾಳೆ.
ಮನೆಯವರ ವಿರೋಧದ ನಡುವೆಯೂ ಸೂರ್ಯ, ದರ್ಶಿನಿ ಒಂದೂವರೆ ವರ್ಷದ ಹಿಂದೆ ಮದುವೆಯಾಗಿದ್ದರು. ಮದುವೆಯಾದ 4 ತಿಂಗಳಿಂದ ವರದಕ್ಷಿಣೆ ಕಿರುಕುಳ ನೀಡುತ್ತಿದ್ದ. ವರದಕ್ಷಿಣೆ ತರುವಂತೆ ಮಗಳನ್ನು ಹಿಂಸಿಸುತ್ತಿದ್ದ. ಇದೀಗ ಬದುಕಿ ಬಾಳಬೇಕಿದ್ದ ನನ್ನ ಮಗಳ ಜೀವನ ಕೊಲೆಯಲ್ಲಿ ಅಂತ್ಯವಾಗಿದೆ. ನನ್ನ ಮಗಳ ಸಾವಿಗೆ ನ್ಯಾಯ ಬೇಕು. ಸೂರ್ಯ ಮತ್ತು ಆತನ ಕುಟುಂಬಸ್ಥರನ್ನು ಬಂಧಿಸಬೇಕು ಎಂದು ಮೃತಳ ಪೋಷಕರು ಆಗ್ರಹಿಸಿದ್ದಾರೆ.
ಇನ್ನು ಈ ಸಾವಿನ ಬಗ್ಗೆ ನಿಖರ ಕಾರಣ ತಿಳಿದುಬಂದಿಲ್ಲ. ಮರಣೋತ್ತರ ಪರೀಕ್ಷೆ ಹಾಗೂ ಪೊಲೀಸರ ತನಿಖೆ ಬಳಿಕ ಸತ್ಯಾಸತ್ಯತೆ ಹೊರ ಬರಲಿದೆ. ಘಟನೆ ಸಂಬಂಧ ಕೆಆರ್ಎಸ್ ಠಾಣೆಯಲ್ಲಿ ಪತಿ ಹಾಗೂ ಮನೆಯವರ ವಿರುದ್ಧ ದರ್ಶಿನಿ ಪೋಷಕರು ದೂರು ನೀಡಿದ್ದಾರೆ.










