ಬೆಳಗಾವಿ: ನೀರು ಕಾಯಿಸುವ ಕ್ವಾಯಿಲ್ನಿಂದ ವಿದ್ಯುತ್ ಪ್ರವಹಿಸಿ ದಂಪತಿ ಹಾಗೂ ಮೊಮ್ಮಗಳು ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಜಿಲ್ಲೆಯ ಶಾಹುನಗರದಲ್ಲಿ ನಡೆದಿದೆ.
ಮೃತರನ್ನು ಮೂಲತಃ ರಾಮದುರ್ಗ ತಾಲೂಕಿನ ಅರಬೆಂಚಿ ತಾಂಡಾದ ಈರಪ್ಪಾ ಗಂಗಪ್ಪ ಲಮಾಣಿ (50), ಶಾಂತವ್ವ ಈರಪ್ಪಾ ಲಮಾಣಿ (45) ಮತ್ತು ಅನ್ನಪೂರ್ಣ ಹುನ್ನಪ್ಪಾ ಲಮಾಣಿ (8) ಎಂದು ಗುರುತಿಸಲಾಗಿದೆ.
ಇಂದು ಬೆಳಗ್ಗೆ ಮನೆಯಲ್ಲಿ ನೀರು ಕಾಯಿಸಲು ಕ್ವಾಯಿಲ್ ಹಾಕಿದ ವೇಳೆ ಮೊದಲಿಗೆ ಮೊಮ್ಮಗಳಿಗೆ ವಿದ್ಯುತ್ ತಗುಲಿದೆ, ನಂತರ ಆಕೆಯನ್ನು ಕಾಪಾಡಲು ಅಜ್ಜ- ಅಜ್ಜಿ ಹೋದಾಗ ಅವರಿಗೂ ವಿದ್ಯುತ್ ತಾಗಿ, ಮೂವರು ಸ್ಥಳದಲ್ಲೇ ಕೊನೆಯುಸಿರೆಳೆದಿದ್ದಾರೆ.
ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ. ಸ್ಥಳಕ್ಕೆ ಎಪಿಎಂಸಿ ಪೊಲೀಸರು ಹಾಗೂ ಹೆಸ್ಕಾಂ ಸಿಬ್ಬಂದಿ ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ.










