ಬೆಂಗಳೂರು: ಬಿಜೆಪಿಯವರ ಬರ ಅಧ್ಯಯನಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕಿಡಿಕಾರಿದ್ದಾರೆ.
ಈ ಸಂಬಂಧ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜಕೀಯಕ್ಕಾಗಿ ಬಿಜೆಪಿಯವರಿಂದ ಬರ ಅಧ್ಯಯನ ಮಾಡಲಾಗುತ್ತಿದೆ. ಕೇಂದ್ರದ ತಂಡ ಅಧ್ಯಯನ ಮಾಡಿ ಇನ್ನೂ ವರದಿ ಕೊಟ್ಟಿಲ್ಲ. ಕೇಂದ್ರ ಅಧ್ಯಯನ ಮಾಡಿದೆ, ಇವರೇನು ಮಾಡೋದು ಎಂದು ಪ್ರಶ್ನಿಸುವ ಮೂಲಕ ಸಿಎಂ ಗರಂ ಆಗಿದ್ದಾರೆ.
ಬಿಜೆಪಿಯವರು ರಾಜಕೀಯಕ್ಕಾಗಿ ಬರ ಅಧ್ಯಯನಕ್ಕಾಗಿ ಹೋಗುತ್ತಿದ್ದಾರೆ. ಮೊದಲು ಕೇಂದ್ರ ಸರ್ಕಾರದ ಬಳಿ ಕುಳಿತು ದುಡ್ಡು ಕೊಡಿಸಲಿ. ಕೇಂದ್ರ ಸರ್ಕಾರದ ಅಧ್ಯಯನ ಮಾಡಿದೆ. ಇವರೇನು ಅಧ್ಯಯನ ಮಾಡೋದು.?. ನಾವೇ ಅಧ್ಯಯನ ಮಾಡಿದ್ದೀವಲ್ಲವಾ. ಅವರು ಮಾಡಲಿ ನಮ್ಮದೇನು ತಕರಾರು ಇಲ್ಲ, ಮಾಡಬಾರದು ಅಂತನೂ ನಾವು ಹೇಳೋಕೆ ಹೋಗಲ್ಲ ಎಂದರು.
ನಾವು ವರದಿ ಕಳುಹಿಸಿ ತುಂಬಾ ದಿನ ಆಯ್ತು, ಸೆಂಟ್ರಲ್ ಟೀಂ ಹೋಗಿ ತುಂಬಾ ದಿನ ಆಯ್ತು, ಇನ್ನೂ ಅವರು ವರದಿ ಕೊಟ್ಟಿಲ್ಲ. ಕೇಂದ್ರ ಸರ್ಕಾರ ಇನ್ನೂ ಪರಿಹಾರ ಕೊಟ್ಟಿಲ್ಲ. 17,900 ಕೋಟಿಯಷ್ಟು ಪರಿಹಾರ ಕೇಳಿದ್ದೇವೆ, 33,700 ಕೋಟಿ ನಷ್ಟವಾಗಿದೆ. ಅದನ್ನ ಮೊದಲು ಕೊಡಿಸಲಿ. ಹಳ್ಳಿಗಾಡಿನ ಜನರ ಮೇಲೆ ಪ್ರೀತಿ ಇದ್ದರೆ, ರೈತರ ಮೇಲೆ ಗೌರವ ಇದ್ದರೆ, ಕರ್ನಾಟಕದ ಮೇಲೆ ಕಾಳಜಿ ಇದ್ದರೆ, ಮೊದಲು ಪರಿಹಾರ ಕೊಡಿಸಲಿ ಎಂದು ಆಗ್ರಹಿಸಿದ್ದಾರೆ.
25 ಜನ ಎಂಪಿಗಳಿದ್ದಾರಲ್ಲವಾ..? ಕೂತು ಮಾತನಾಡಿ ಕೊಡಿಸಲಿ. ನಮ್ಮ ಮಂತ್ರಿಗಳಿಗೆ ಕೇಂದ್ರದ ಸಚಿವರು ಭೇಟಿ ಮಾಡಲು ಸಮಯನೇ ಕೊಟ್ಟಿಲ್ಲ. ದೆಹಲಿಗೆ ಹೋದರೂ ಸಮಯ ಕೊಟ್ಟಿಲ್ಲ. ಇವರಿಗೆ ಕರ್ನಾಟಕದ ಬಗ್ಗೆ ಯಾವ ಕಾಳಜಿ ಇದೆ ಎಂದು ಸಿಎಂ ಪ್ರಶ್ನಿಸಿದರು.










