ಬೆಂಗಳೂರು: ಬೆಳಗಾವಿ ಅಧಿವೇಶನದಲ್ಲಿ ಒಳ ಮೀಸಲಾತಿ ಸಂಬಂಧ ಸದಾಶಿವ ಆಯೋಗದ ವರದಿ ಜಾರಿಗೆ ಸಿಎಂಗೆ ಮನವಿ ಮಾಡಿದ್ದೇವೆ ಎಂದು ಗೃಹ ಸಚಿವ ಜಿ ಪರಮೇಶ್ವರ್ ಅವರು ತಿಳಿಸಿದ್ದಾರೆ.
ಒಳ ಮೀಸಲಾತಿ ಸಂಬಂಧ ಸದಾಶಿವ ವರದಿ ಜಾರಿ ವಿಚಾರ ಹಾಗೂ ನಿನ್ನೆ ಎಡಗೈ ಸಮುದಾಯದ ಸಚಿವರು, ಶಾಸಕರ ಸಭೆ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಪರಮೇಶ್ವರ್, ಒಳ ಮೀಸಲಾತಿ ವಿಚಾರದಲ್ಲಿ ನಾವು ಚಿತ್ರದುರ್ಗದಲ್ಲಿ ಚುನಾವಣೆ ವೇಳೆ ಎಸ್ಸಿ-ಎಸ್ಟಿ ಸಮಾವೇಶ ಮಾಡಿದ್ವಿ. ಈ ಸಮಾವೇಶದಲ್ಲಿ 10 ಘೋಷಣೆ ಮಾಡಿದ್ವಿ. ಅದರಲ್ಲಿ ಒಳ ಮೀಸಲಾತಿಗೆ ಸಂಬಂಧಿಸಿದ ಸದಾಶಿವ ಆಯೋಗದ ವರದಿಯನ್ನು ಮೊದಲ ಅಧಿವೇಶನದಲ್ಲಿ ಮಂಡನೆ ಮಾಡ್ತೀವಿ ಅಂತ ಘೋಷಣೆ ಮಾಡಿದ್ವಿ ಎಂದು ಹೇಳಿದರು.
ಕಾರಣಾಂತರಗಳಿಂದ ಮೊದಲ ಅಧಿವೇಶನದಲ್ಲಿ ಇದನ್ನು ಮಾಡಲು ಆಗಲಿಲ್ಲ. ಈಗಲೂ ಸಿಎಂ ಗಮನಕ್ಕೆ ತಂದಿದ್ದೇವೆ. ಬೆಳಗಾವಿ ಅಧಿವೇಶನದಲ್ಲಿ ಮಂಡನೆ ಮಾಡಬೇಕು ಎಂದು ಸಿಎಂಗೆ ತಿಳಿಸಿದ್ದೇವೆ. ನಾನು, ಮಹದೇವಪ್ಪ, ಮುನಿಯಪ್ಪ, ಪ್ರಿಯಾಂಗ್ ಖರ್ಗೆ ಎಲ್ಲರು ಸಿಎಂ ಗಮನಕ್ಕೆ ತಂದಿದ್ದೇವೆ. ಸಿಎಂ ಅವರು ಸಮುದಾಯದ ಮುಖಂಡರ ಜೊತೆ ಚರ್ಚೆ ಮಾಡಿ ತೀರ್ಮಾನ ಮಾಡೋದಾಗಿ ಹೇಳಿದ್ದಾರೆ ಎಂದರು.
ಸದಾಶಿವ ಆಯೋಗದ ವರದಿ ಜಾರಿ ಮಾಡೋ ಕೆಲಸ ಮಾಡ್ತೀವಿ. ಎಲ್ಲರ ಅಭಿಪ್ರಾಯ ತೆಗೆದುಕೊಳ್ಳಬೇಕು. ಎಲ್ಲರ ಮನಸು ಒಂದಾಗಬೇಕು. ಹೀಗಾಗಿ ಸಿಎಂ ಅವರು ಎಲ್ಲರ ಜೊತೆ ಮಾತಾಡಿ ತೀರ್ಮಾನ ಮಾಡೋಣ ಅಂತ ಹೇಳಿದ್ದಾರೆ, ಮಾಡ್ತೀವಿ. ಸರ್ಕಾರಕ್ಕೆ ಒಳ ಮೀಸಲಾತಿ ಮಾಡಬಾರದು ಅಂತ ಭಿನ್ನಾಭಿಪ್ರಾಯ ಇಲ್ಲ. ಬೆಳಗಾವಿ ಅಧಿವೇಶನದಲ್ಲಿ ಮಾಡಬೇಕು ಅಂತ ಸಿಎಂಗೆ ಹೇಳಿದ್ದೇವೆ ಎಂದು ತಿಳಿಸಿದರು.










