ಯತ್ನಾಳ್ ಕಾಂಗ್ರೆಸ್ ಏಜೆಂಟ್ ಅಲ್ಲ, ಕಾಂಗ್ರೆಸ್‌ಗೂ ಯತ್ನಾಳ್‌ಗೂ ಸಂಬಂಧ ಇಲ್ಲ: ಎಂ.ಬಿ.ಪಾಟೀಲ್ .

58
firstsuddi

ಬೆಂಗಳೂರು: ಬಸನಗೌಡ ಪಾಟೀಲ್ ಯತ್ನಾಳ್ ಕಾಂಗ್ರೆಸ್ ಏಜೆಂಟ್ ಅಲ್ಲ, ಕಾಂಗ್ರೆಸ್‌ಗೂ ಯತ್ನಾಳ್‌ಗೂ ಸಂಬಂಧ ಇಲ್ಲ ಎಂದು ಸಚಿವ ಎಂ.ಬಿ.ಪಾಟೀಲ್ ಹೇಳಿದರು.

ನಗರದಲ್ಲಿ ಮಾತನಾಡಿದ ಅವರು, ಯತ್ನಾಳ್ ಬಳಿ ಬಿಜೆಪಿಯವರ ಎಲ್ಲಾ ವೀಕ್ನೆಸ್ ಇದ್ದಂತೆ ಕಾಣುತ್ತಿದೆ. ಯತ್ನಾಳ್ ಹಿಂದಿನಿಂದ ಹೇಳುತ್ತ ಬಂದಿರುವುದು ಎಲ್ಲವೂ ಸತ್ಯ. ಹೀಗಾಗಿಯೇ ಯತ್ನಾಳ್ ವಿರುದ್ಧ ಬಿಜೆಪಿಯವರು ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ. ಯಾವುದೇ ಶಿಸ್ತು ಕ್ರಮ ಆಗದೇ ಇರುವುದು ನೋಡಿದರೆ ಅವರ ಬಳಿ ಎಲ್ಲ ದಾಖಲೆ ಇದ್ದಂತೆ ಇದೆ. ಸರ್ಕಾರ ಕೂಡ ತನಿಖೆ ಮಾಡ್ತಾ ಇದೆ. ಕೊರೊನಾ ಸಂದರ್ಭದಲ್ಲಿ ಗುತ್ತಿಗೆದಾರರ ಅಸೋಸಿಯೇಷನ್ ಆರೋಪ ಸೇರಿ ಎಲ್ಲ ತನಿಖೆ ಮಾಡ್ತೇವೆ. ಸರ್ಕಾರ ಸುಮ್ಮನೆ ಕುಳಿತಿಲ್ಲ ಎಂದು ತಿಳಿಸಿದರು.

ಜಾತಿ ಜನಗಣತಿ ವಿಚಾರದಲ್ಲಿ ಪದೇ ಪದೇ ಹೇಳಿಸಬೇಡಿ. ಹಿಂದೂ ಲಿಂಗಾಯತ, ಹಿಂದೂ ಬಣಜಿಗ, ಹಿಂದೂ ಸಾದರ ಎಂದು ಜಾತಿ ಜನಗಣತಿಯಲ್ಲಿ ಬರೆಸಿದ್ದಾರೆ. 2ಎ ಮೀಸಲಾತಿ ಸಲುವಾಗಿ ಬೇರೆ ಬೇರೆ ಬರೆಸಿದರೆ ಯಾವುದೇ ಪ್ರಯೊಜನ ಇಲ್ಲ. 17-22% ನಾವು ಲಿಂಗಾಯತರು ರಾಜ್ಯದಲ್ಲಿ ಇದ್ದೇವೆ. ಒಂದೇ ಸೂರಿನಡಿ ಎಲ್ಲ ಲಿಂಗಾಯತರನ್ನು ತರಬೇಕಿದೆ. ಜಾತಿ ಜನಗಣತಿಗೆ ನಮ್ಮ ವಿರೋಧವಿಲ್ಲ. ಗೊಂದಲಗಳನ್ನು ಸರಿಪಡಿಸಿ ಎಂಬುದಷ್ಟೇ ನಮ್ಮ ಆಗ್ರಹ ಎಂದರು.

ಹೆಚ್ಚುವರಿ ಡಿಸಿಎಂ ಆಯ್ಕೆ ವಿಚಾರವಾಗಿ ನಾನು ಬಹಿರಂಗವಾಗಿ ಏನೂ ಹೇಳುವುದಿಲ್ಲ. ನಮ್ಮ ಅಭಿಪ್ರಾಯ ನಮ್ಮ ಹೈಕಮಾಂಡ್ ಮುಂದೆ ಹೇಳ್ತೀನಿ. ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಮುಂದೆ ಹೇಳ್ತೇವೆ ಎಂದು ಹೇಳಿದರು

ಬಿಜೆಪಿ ಎಷ್ಟು ದುರ್ಬಲ ಆಗಿದೆ ಅಂದ್ರೆ, ಯತ್ನಾಳ್ ಮೇಲೆ ಕ್ರಮ ಕೈಗೊಳ್ಳಲು ಆಗ್ತಿಲ್ಲ. ಯತ್ನಾಳ್ ವಿರುದ್ಧ ಕ್ರಮ ಆಗದೇ ಇರುವುದು ಬಿಜೆಪಿ ದೌರ್ಬಲ್ಯ. ನಿನ್ನೆ ಕೋರ್ ಕಮಿಟಿ ಮೀಟಿಂಗ್ ಮಾಡಿದ್ದಾರೆ. ಆದ್ರೂ ಯತ್ನಾಳ್ ಮೇಲೆ ಕ್ರಮ ಆಗ್ತಿಲ್ಲ. ಕಳೆದ ಐದು ವರ್ಷಗಳಲ್ಲಿ ಯತ್ನಾಳ್ ಹೇಳಿದ್ದೆಲ್ಲ ಸತ್ಯ ಇದೆ. ಅದಕ್ಕಾಗಿಯೇ ಬಿಜೆಪಿಯವರು ಹೆದರಿಕೊಂಡಿದ್ದಾರೆ. ಕಾಂಗ್ರೆಸ್ ಏಜೆಂಟ್ ಆಗಿದ್ರೆ ಯಾಕೆ ಆ್ಯಕ್ಷನ್ ತೆಗೆದುಕೊಳ್ತಿಲ್ಲ. ಕಾಂಗ್ರೆಸ್‌ಗೂ ಯತ್ನಾಳ್‌ಗೂ ಸಂಬಂಧ ಇಲ್ಲ ಎಂದು ಸ್ಪಷ್ಟಪಡಿಸಿದರು.