ಉಳ್ಳಾಲ: ಅಲೆಯ ಸೆಳೆತಕ್ಕೆ ಸಿಲುಕಿ ಇಬ್ಬರು ಮೃತಪಟ್ಟ ಘಟನೆ ನಿನ್ನೆ ಸಮ್ಮರ್ ಸ್ಯಾಂಡ್ ಬೀಚ್ ನಲ್ಲಿ ನಡೆದಿದೆ.
ಮೃತರನ್ನು ಬಶೀರ್ (23), ಸಲ್ಮಾನ್ (19) ಎಂದು ಗುರುತಿಸಲಾಗಿದೆ. ಇವರಿಬ್ಬರು ಚಿಕ್ಕಮಗಳೂರು ಮೂಲದವರು ಎನ್ನಲಾಗಿದೆ. ಕುಟುಂಬ ಸಮೇತ ಉಳ್ಳಾಲ ದರ್ಗಾ ಸಂದರ್ಶನದ ಬಳಿಕ ಬೀಚ್ ಗೆ ತೆರಳಿ ಸಮುದ್ರದ ನೀರಿನಲ್ಲಿ ಆಟವಾಡುತ್ತಿದ್ದ ಬಶೀರ್, ಸಲ್ಮಾನ್ ಹಾಗೂ ಸೈಫ್ ಆಲಿ (27) ಅಲೆಗೆ ಸಿಲುಕಿ ನಾಪತ್ತೆಯಾಗಿದ್ದರು.
ಈ ವೇಳೆ ಸ್ಥಳೀಯ ಈಜುಗಾರರು ಸಲ್ಮಾನ್ ಹಾಗೂ ಸೈಫುಲ್ಲಾ ಅವರನ್ನು ರಕ್ಷಿಸಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಬಶೀರ್ ನೀರಿನಲ್ಲಿ ಮುಳುಗಿ ನಾಪತ್ತೆ ಆಗಿದ್ದು, ಮೃತ ದೇಹಕ್ಕಾಗಿ ಶೋಧ ಮುಂದುವರಿದಿದೆ. ಸಲ್ಮಾನ್ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾರೆ ಎಂದು ತಿಳಿದು ಬಂದಿದೆ.
ಸದ್ಯ ಸೈಫುಲ್ಲಾ ಅವರು ಚೇತರಿಸಿ ಕೊಂಡಿದ್ದಾರೆ. ಘಟನಾ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.










