ಕನ್ನಡ ನಾಮಫಲಕ ಕಡ್ಡಾಯ ಮಾಡಬೇಕು, ಸಿಎಂ ನಮ್ಮ ಬೇಡಿಕೆಗಳನ್ನ ಈಡೇರಿಸದಿದ್ದರೆ ಬಂದ್ ಮಾಡ್ತೀವಿ: ವಾಟಾಳ್ ನಾಗರಾಜ್.

57
firstsuddi

ಕನ್ನಡದ ನಾಮಫಲಕ ಹಾಗೂ ಕನ್ನಡ ಹೋರಾಟಗಾರರನ್ನು ಬಂಧಿಸಿರುವ ವಿಚಾರವಾಗಿ ಕನ್ನಡ ಪರ ಹೋರಾಟಗಾರ ವಾಟಾಳ್ ನಾಗರಾಜ್, ತೀವ್ರ ವಾಗ್ದಾಳಿ ನಡೆಸಿದ್ದಾರೆ. ಕರ್ನಾಟಕದಲ್ಲಿ ಕನ್ನಡ ನಾಮಫಲಕ ಕಡ್ಡಾಯ ವಿಚಾರವಾಗಿ ಹೋರಾಟ ನಡೆಸಿದ್ದ ಕರ್ನಾಟಕ ರಕ್ಷಣಾ ವೇದಿಕೆಯ ರಾಜ್ಯಾಧ್ಯಕ್ಷ ನಾರಾಯಣ ಗೌಡ ಅವರನ್ನು ಬಂಧಿಸಿರುವುದನ್ನು ವಾಟಾಳ್ ಖಂಡಿಸಿದ್ದಾರೆ.

ಮಾಧ್ಯಮಗಳ ಜೊತೆ ಮಾತನಾಡಿದ ವಾಟಾಳ್ ನಾಗರಾಜ್, ‘ಕನ್ನಡ ನಾಮಫಲಕ ಕಡ್ಡಾಯ ಮಾಡಬೇಕು. ಕನ್ನಡ ಹೋರಾಟಗಾರರನ್ನು ಬಂಧನದಿಂದ ಬಿಡುಗಡೆ ಮಾಡ್ಬೇಕು. ನಮ್ಮ ಬೇಡಿಕೆಯ ಮನವಿಯನ್ನು ಸಿಎಂಗೆ ನೀಡ್ತೀವಿ. ಸಿಎಂ ನಮ್ಮಬೇಡಿಕೆಗಳನ್ನ ಈಡೇರಿಸದಿದ್ದರೆ ಬಂದ್ ಮಾಡ್ತೀವಿ. ಫೆಬ್ರವರಿ ಎರಡನೇ ವಾರ ಬಂದ್ ಮಾಡ್ತೀವಿ. ಅನ್ಯ ಭಾಷೆ ಸಿನಿಮಾ ಪ್ರದರ್ಶನ ಬಂದ್ ಮಾಡ್ತೀವಿ’ ಎಂದಿದ್ದಾರೆ.

ನಾರಾಯಣ ಗೌಡ ಅವರ ಬಂಧನವನ್ನು ವಿರೋಧಿಸಿ ಇವತ್ತು ಕೂಡ ಹಲವಾರು ಕನ್ನಡಪರ ಸಂಘಟನೆಗಳು ಬೀದಿಗೆ ಇಳಿದಿವೆ. ಮೈಸೂರು ವೃತ್ತದ ಬಳಿ ಹೋರಾಟಕ್ಕೆ ಸಿದ್ಧರಾಗಿದ್ದ ವಾಟಾಳ್ ನಾಗರಾಜ್ ಮತ್ತು ಇತರರಿಗೆ ಪೊಲೀಸರು ನೋಟಿಸ್ ಕೊಡುವುದಕ್ಕೆ ಮುಂದಾಗಿದ್ದಾರೆ. ಸ್ವಾತಂತ್ರ್ಯ ಉದ್ಯಾನವನದಲ್ಲಿ ಹೋರಾಟ ನಡೆಸುವಂತೆ ಮನವೊಲಿಸುವ ಕೆಲಸವೂ ನಡೆದಿದೆ.