ಹಾಸನ: ಹುಟ್ಟುಹಬ್ಬ ಸಂಭ್ರಮಾಚರಣೆ ಬಳಿಕ ತಾಲೂಕಿನ ಮಡೆನೂರು ಫ್ಲೈಓವರ್ ಬಳಿ ಕಾರಿನಲ್ಲಿ ಜಾಲಿ ರೈಡ್ ಹೋಗುತ್ತಿದ್ದಾಗ ಅಪಘಾತ ಸಂಭವಿಸಿದ್ದು, ಇಬ್ಬರು ಮೃತಪಟ್ಟಿದ್ದಾರೆ.
ನಿನ್ನೆ ರಾತ್ರಿ ಹುಟ್ಟುಹಬ್ಬ ಸಂಭ್ರಮಾಚರಣೆ ಮುಗಿಸಿ ಜಾಲಿ ರೈಡ್ ಹೋಗುತ್ತಿದ್ದಾಗ ಕಾರು ಎಲೆಕ್ಟ್ರಿಕ್ ಪೋಲ್ಗೆ ಡಿಕ್ಕಿ ಹೊಡೆದು ಜಮೀನಿನಲ್ಲಿ ಉರುಳಿಬಿದ್ದಿದೆ. ಪರಿಣಾಮ ಕಾರಿನಲ್ಲಿದ್ದ ರಕ್ಷಿತ್(22), ಕುಶಾಲ್(24) ಎಂಬುವವರು ಮೃತಪಟ್ಟಿದ್ದಾರೆ. ರಕ್ಷಿತ್ ಸ್ಥಳದಲ್ಲೇ ಮೃತಪಟ್ಟಿದ್ದು, ಚಿಕಿತ್ಸೆ ಫಲಿಸದೆ ಆಸ್ಪತ್ರೆಯಲ್ಲಿ ಕುಶಾಲ್ ಸಾವಿಗೀಡಾಗಿದ್ದಾನೆ.
ಇನ್ನು ಕಾರಿನಲ್ಲಿದ್ದ ಅಭಿಷೇಕ್, ನಿಶಾಂತ್, ಮಂಜುನಾಥ್ ಎಂಬುವರಿಗೆ ಗಂಭೀರ ಗಾಯಗಳಾಗಿವೆ. ಗಾಯಾಳುಗಳನ್ನು ಹಾಸನದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಈ ಕುರಿತು ಶಾಂತಿಗ್ರಾಮ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.










