ನವದೆಹಲಿ: ಯಾರಿಗೆ ಅಯೋಧ್ಯೆಯ ರಾಮಮಂದಿರದ ಬಾಲರಾಮನ ಪ್ರಾಣಪ್ರತಿಷ್ಠಾಪನಾ ಸಮಾರಂಭಕ್ಕೆ ಹೋಗಲು ಇಷ್ಟ ಇಲ್ಲವೋ ಅವರು ಹೋಗುವುದು ಬೇಡ. ನಾನು ಈ ಸಮಾರಂಭದಲ್ಲಿ ಪಾಲ್ಗೊಳ್ಳುತ್ತೇನೆ ಎಂದು ಟೀಂ ಇಂಡಿಯಾ ಮಾಜಿ ಕ್ರಿಕೆಟಿಗ ಹಾಗೂ ಸಂಸದ ಹರ್ಭಜನ್ ಸಿಂಗ್ ಹೇಳಿದ್ದಾರೆ.
ಸುದ್ದಿ ವಾಹಿನಿಗೆ ನೀಡಿದ ಸಂದರ್ಶನವೊಂದರಲ್ಲಿ ಮಾತನಾಡಿದ ಅವರು, ನಾನು ಜೀವನದಲ್ಲಿ ಈ ಮಟ್ಟಕ್ಕೆ ಬೆಳೆಯಲು ದೇವರೇ ಕಾರಣ. ನನಗೆ ದೇವರ ಮೇಲೆ ನಂಬಿಕೆ ಇದೆ. ಯಾರಿಗೆ ನಂಬಿಕೆ ಇಲ್ಲವೋ ಅವರು ಹೋಗುವುದು ಬೇಡ. ಕಾಂಗ್ರೆಸ್ ಹೋಗದಿರಲು ನಿರ್ಧರಿಸಿದ್ದು, ಅದು ಅವರ ತೀರ್ಮಾನ. ಒಟ್ಟಿನಲ್ಲಿ ಯಾರು ಏನು ಬೇಕಾದ್ರೂ ಹೇಳಿಕೊಳ್ಳಲಿ ನಾನು ಅಯೋಧ್ಯೆಗೆ ಹೋಗುವುದು ಪಕ್ಕಾ ಎಂದು ಅವರು ಹೇಳಿದ್ದಾರೆ.
ಮಹಾಮಂದಿರದದಲ್ಲಿ ರಾಮನ ಪ್ರಾಣ-ಪ್ರತಿಷ್ಠಾ ಸಮಾರಂಭವೂ ಒಂದು ಐತಿಹಾಸಿಕ ದಿನವಾಗಿದೆ. ಈ ಬಗ್ಗೆ ಕಾಂಗ್ರೆಸ್, ಬಿಜೆಪಿಯ ವಿರುದ್ಧ ರಾಜಕೀಯ ಉದ್ದೇಶದ ಆರೋಪ ಮಾಡಿದೆ. ಪ್ರಾಣಪ್ರತಿಷ್ಠಾಪನೆ ನಡೆಯುತ್ತಿರುವುದು ಖುಷಿಯ ವಿಚಾರ ಮತ್ತು ಸರಿಯಾದ ನಡೆಯಾಗಿದೆ. ನಾನು ಈ ಸಮಾರಂಭದಲ್ಲಿ ಖಂಡಿತ ಭಾಗಿಯಾಗುತ್ತೇನೆ. ಇದು ನನ್ನ ವೈಯಕ್ತಿಕ ನಿರ್ಧಾರವಾಗಿದೆ ಎಂದಿದ್ದಾರೆ.
ಶ್ರೀರಾಮ ಎಲ್ಲರಿಗೂ ಸೇರಿದವನು. ರಾಮನ ಜನ್ಮಸ್ಥಳದಲ್ಲಿ ಮಂದಿರ ನಿರ್ಮಾಣವಾಗಿರುವುದು ಬಹಳ ಖುಷಿಯ ವಿಚಾರ. ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡು ರಾಮನ ಕೃಪೆಗೆ ಪಾತ್ರರಾಗಬೇಕು. ಪ್ರಧಾನಿ ನರೇಂದ್ರ ಮೋದಿಯವರ ನೇತೃತ್ವದಲ್ಲಿ ಮಂದಿರದ ಕೆಲಸವಾಗುತ್ತಿದೆ ಇದಕ್ಕಾಗಿ ನಾನು ಅವರನ್ನು ಅಭಿನಂದಿಸುತ್ತೇನೆ ಎಂದಿದ್ದಾರೆ.
ನನಗೆ ಧರ್ಮ ಮತ್ತು ದೇವರಲ್ಲಿ ಕಟ್ಟುನಿಟ್ಟಾದ ನಂಬಿಕೆಯುಳ್ಳವನು, ನಾನು ಪ್ರತಿ ಮಂದಿರ, ಮಸೀದಿ ಮತ್ತು ಗುರುದ್ವಾರಕ್ಕೆ ಭೇಟಿ ನೀಡಿ ಆಶೀರ್ವಾದ ಪಡೆಯುತ್ತೇನೆ. ನನಗೆ ಅವಕಾಶ ಸಿಕ್ಕಾಗಲೆಲ್ಲಾ ದೇವಸ್ಥಾನಕ್ಕೆ ಭೇಟಿ ನೀಡುತ್ತೇನೆ. ರಾಮಮಂದಿರದಲ್ಲಿ ಬಾಲರಾಮನ ಪ್ರಾಣಪ್ರತಿಷ್ಠಾಪನೆ ನಮ್ಮ ಜೀವಿತಾವಧಿಯಲ್ಲಿ ಆಗುತ್ತಿರುವುದು ಸೌಭಾಗ್ಯವಾಗಿದೆ ಎಂದಿದ್ದಾರೆ.










