ಬೆಂಗಳೂರು: ಯುವತಿ ಮೇಲೆ ಅತ್ಯಾಚಾರ ಎಸಗಿ ವೀಡಿಯೋ ಮಾಡಿದ ಆರೋಪದ ಮೇಲೆ ಬೀದರ್ ಮೂಲದ ಯುವಕನನ್ನು ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲ ಪೊಲೀಸರು ಬಂಧಿಸಿದ್ದಾರೆ.
ಬಂಧಿತ ಆರೋಪಿಯನ್ನು ಬೀದರ್ ಮೂಲದ ಯುವಕ ಶಿವಕುಮಾರ್ ಹೊಸಳ್ಳಿ(25) ಎಂದು ಗುರುತಿಸಲಾಗಿದೆ. ನಗರದ ಚಿಕ್ಕಪೇಟೆಯಲ್ಲಿ ವಾಸವಾಗಿರುವ ಶಿವಕುಮಾರ್, ಆರು ವರ್ಷದ ಹಿಂದೆ(2018) ಉಡುಪಿಯಲ್ಲಿ ನಡೆದ ವಿಶ್ವ ಹಿಂದೂ ಪರಿಷತ್ ಕಾರ್ಯಕ್ರಮದಲ್ಲಿ ಯುವತಿಗೆ ಪರಿಚಯವಾಗಿದ್ದು, ಬಳಿಕ ಯುವತಿ ತಾಯಿ ಬಳಿ ಮೊಬೈಲ್ ನಂಬರ್ ತೆಗೆದುಕೊಂಡು ಮೆಸೇಜ್ ಮಾಡಲು ಆರಂಭಿಸಿದ್ದಾನೆ.
2018ರ ಮಾರ್ಚ್ನಲ್ಲಿ ನೆಲಮಂಗಲದಲ್ಲಿರುವ ಯುವತಿ ಮನೆಗೆ ಶಿವಕುಮಾರ್ ಹೋಗಿದ್ದಾನೆ. ಈ ವೇಳೆ ಯುವತಿ ಮನೆಯಲ್ಲಿ ಯಾರೂ ಇರಲಿಲ್ಲ. ಈ ಸಮಯದಲ್ಲಿ ಯುವತಿ ಮೇಲೆ ಅತ್ಯಾಚಾರವೆಸಗಿದ್ದಾನೆ. ಈ ವೇಳೆ ಯುವತಿಗೆ ಗೊತ್ತಿಲ್ಲದಹಾಗೆ ಶಿವಕುಮಾರ್ ಫೋನಿನಲ್ಲಿ ಫೋಟೋ ತೆಗೆದು, ವೀಡಿಯೋ ಮಾಡಿಕೊಂಡಿದ್ದಾನೆ.
ಬಳಿಕ ಈ ಫೋಟೋ ಮತ್ತು ವೀಡಿಯೋಗಳನ್ನು ಇಟ್ಟುಕೊಂಡು ಸಾಮಾಜಿಕ ಜಾಲತಾಣದಲ್ಲಿ ಹರಿಬಿಡುವುದಾಗಿ ಬೆದರಿಸಿ, ಹಲವಾರು ಬಾರಿ ಅತ್ಯಾಚಾರವೆಸಗಿದ್ದಾನೆ. ಅಲ್ಲದೆ ಸಂತ್ರಸ್ತೆಯಿಂದ 85,000 ಹಣವನ್ನು ಶಿವಕುಮಾರ್ ಪಡೆದುಕೊಂಡಿದ್ದಾನೆ. ಬಳಿಕ ಸಂತ್ರಸ್ತೆಯ ಅಶ್ಲೀಲ ಫೋಟೋ ಮತ್ತು ವೀಡಿಯೋಗಳನ್ನು ಸಂತ್ರಸ್ತೆಯ ಚಿಕ್ಕಪ್ಪನ ಮಗಳ ಮೊಬೈಲ್ಗೆ ಕಳಿಸಿದ್ದಾನೆ ಎಂದು ಆರೋಪಿಸಲಾಗಿದೆ.
ಕಳೆದ ಜನವರಿ 30 ರಂದು ಸಂತ್ರಸ್ತೆ ಮತ್ತು ಅವರ ತಂದೆ-ತಾಯಿ ಎಲ್ಲರೂ ನೆಲಮಂಗಲದ ಗಣೇಶನ ಗುಡಿ ದೇವಸ್ಥಾನಕ್ಕೆ ಹೋದಾಗ, ಶಿವಕುಮಾರ್ ಸಂತ್ರಸ್ತೆಗೆ ಕರೆ ಮಾಡಿ ಬಾ ನಾನು ನಿನ್ನೊಂದಿಗೆ ಸೆಕ್ಸ್ ಮಾಡಬೇಕು ಎಂದು ಬಲವಂತವಾಗಿ ಪೀಡಿಸಿದ್ದಾನೆ. ಈ ವಿಚಾರವನ್ನು ಸಂತ್ರಸ್ತೆ ತಂದೆ ತಾಯಿಗೆ ತಿಳಿಸಿದ್ದಾರೆ. ನಂತರ ಈ ಬಗ್ಗೆ ದೂರು ನೀಡುವುದು ಒಳ್ಳೆಯದೆಂದು ತೀರ್ಮಾನಿಸಿ ಸಂತ್ರಸ್ತೆ, ನೆಲಮಂಗಲ ಟೌನ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಶಿವಕುಮಾರ್ ಹೊಸಳ್ಳಿ ವಿರುದ್ಧ ಕಾನೂನು ರೀತಿ ಕ್ರಮ ಜರುಗಿಸಬೇಕೆಂದು ಸಂತ್ರಸ್ತೆ ಆಗ್ರಹಿಸಿದ್ದಾರೆ.
ಶಿವಕುಮಾರ್ ಹೊಸಳ್ಳಿ ವಿರುದ್ಧ ಪ್ರಕರಣ ದಾಖಲಿಸಿಕೊಂಡ ನೆಲಮಂಗಲ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.










