ರಂಜಾನ್ ಹಬ್ಬ: ದಕ್ಷಿಣ ಕನ್ನಡ, ಉಡುಪಿಯಲ್ಲಿ ಇಂದೇ ರಜೆ, ನಾಳೆ ನಿಯಮಿತ ಕೆಲಸದ ದಿನ…

36
firstsuddi

ಮಂಗಳೂರು: ರಂಜಾನ್ ಹಬ್ಬ ಅಥವಾ ಈದ್ ಉಲ್-ಫಿತರ್ ಪ್ರಯುಕ್ತ ಇಂದು ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳಲ್ಲಿ ಸಾರ್ವಜನಿಕ ರಜೆ ಘೋಷಿಸಲಾಗಿದೆ. ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲಾಧಿಕಾರಿಗಳ ಕಚೇರಿಗಳಿಂದ ಅಧಿಕೃತ ಆದೇಶ ಹೊರಡಿಸಲಾಗಿದ್ದು, ರಾಜ್ಯ ಸರ್ಕಾರದ ಅಧೀನ ಕಾರ್ಯದರ್ಶಿ ವಿಜಯ್ ಕುಮಾರ್ ಎಚ್.ಬಿ ಅಧಿಕೃತ ಆದೇಶಕ್ಕೆ ಸಹಿ ಹಾಕಿದ್ದಾರೆ.

ಇಂದು ರಂಜಾನ್ ರಜೆ ಘೋಷಿಸಲಾಗಿದ್ದರೂ ಶಾಲಾ-ಕಾಲೇಜುಗಳಿಗೆ ನಿಗದಿತ ವೇಳಾಪಟ್ಟಿಯಂತೆ ಪರೀಕ್ಷೆಗಳು ನಡೆಯಲಿವೆ. ಸರ್ಕಾರಿ ಕಚೇರಿಗಳನ್ನು ಮುಚ್ಚಲಾಗುವುದು. ಇಂದು ರಜೆ ನೀಡಿರುವ ಕಾರಣ ನಾಳೆ, ಅಂದರೆ ಏಪ್ರಿಲ್ 11 ಅನ್ನು ನಿಯಮಿತ ಕೆಲಸದ ದಿನವೆಂದು ಪರಿಗಣಿಸಲಾಗುತ್ತದೆ ಎಂದು ಆದೇಶದಲ್ಲಿ ತಿಳಿಸಲಾಗಿದೆ.

ಈದ್ ಉಲ್-ಫಿತರ್ ವಿಶ್ವಾದ್ಯಂತ ಮುಸ್ಲಿಮರಿಗೆ ಅತ್ಯಂತ ಮಹತ್ವದ ಹಬ್ಬಗಳಲ್ಲಿ ಒಂದಾಗಿದೆ. ಇದು ಪವಿತ್ರ ರಂಜಾನ್ ತಿಂಗಳ ಮುಕ್ತಾಯವನ್ನು ಸೂಚಿಸುತ್ತದೆ. ಇದನ್ನು ಮುಸ್ಲಿಂ ಸಮುದಾಯದವರು ಹಬ್ಬವಾಗಿ ಆಚರಿಸುತ್ತಿದ್ದು, ವಿಶೇಷ ಪ್ರಾರ್ಥನೆ ಸಲ್ಲಿಸುತ್ತಾರೆ.

ಕೇರಳದಲ್ಲಿ ನಿನ್ನೆ ಚಂದ್ರ ದರ್ಶನವಾದ ಹಿನ್ನೆಲೆಯಲ್ಲಿ ಕರಾವಳಿ ಪ್ರದೇಶದಲ್ಲಿ ಇಂದೇ ರಂಜಾನ್ ಆಚರಿಸಲಾಗುತ್ತಿದೆ. ಈ ಬಗ್ಗೆ ದಕ್ಷಿಣ ಕನ್ನಡ ಖಾಝಿ ತ್ವಾಕಾ ಅಹ್ಮದ್ ಮುಸ್ಲಿಯಾರ್ ಮಂಗಳವಾರ ರಾತ್ರಿ ಘೋಷಣೆ ಮಾಡಿದ್ದರು. ಇದರಂತೆ, ಕರಾವಳಿ ಭಾಗದ ದಕ್ಷಿಣ ಕನ್ನಡ, ಕಾಸರಗೋಡು, ಉಡುಪಿಯಲ್ಲಿ ಹಬ್ಬ ಇಂದು ಆಚರಿಸಲಾಗುತ್ತಿದೆ.

ಕರಾವಳಿ ಪ್ರದೇಶ ಹೊರತುಪಡಿಸಿ ಕರ್ನಾಟಕದ ಎಲ್ಲೆಡೆ ನಾಳೆ, ಅಂದರೆ ಏಪ್ರಿಲ್ 11ರಂದು ರಂಜಾನ್ ಹಬ್ಬ ಆಚರಣೆ ನಡೆಯಲಿದೆ.