ಮಹಾರಾಷ್ಟ್ರದಲ್ಲಿ ಇಂದು ಮಹಾ ಚುನಾವಣೆ – ಎಂವಿಎ ಮತ್ತು ಮಹಾಯುತಿ ನಡುವೆ ಭರ್ಜರಿ ಪೈಪೋಟಿ.

22

ಮುಂಬೈ: ಮಹಾರಾಷ್ಟ್ರ ವಿಧಾನಸಭೆಯ ಎಲ್ಲಾ 288 ಕ್ಷೇತ್ರಗಳು, ಜಾರ್ಖಂಡ್‌ನಲ್ಲಿ 2ನೇ ಮತ್ತು ಅಂತಿಮ ಹಂತದಲ್ಲಿ 38 ಕ್ಷೇತ್ರಗಳಿಗೆ ಇಂದು ಮತದಾನ ನಡೆಯಲಿದೆ. ಮಹಾರಾಷ್ಟ್ರದಲ್ಲಿ ಮಹಾ ವಿಕಾಸ್ ಅಘಾಡಿ-ಮಹಾಯುತಿ ಮೈತ್ರಿಕೂಟಗಳ ನಡುವೆ ನೇರಾನೇರ ಹಣಾಹಣಿ ಏರ್ಪಟ್ಟಿದೆ. ಜಾರ್ಖಂಡ್‌ನಲ್ಲಿ ಬಿಜೆಪಿ ಮತ್ತು ಇಂಡಿಯಾ ಮೈತ್ರಿಕೂಟದ ನಡುವೆ ಫೈಟ್ ಇದೆ. ಸುಗಮ ಮತದಾನಕ್ಕೆ ಚುನಾವಣಾ ಆಯೋಗ ಸಕಲ ಸಿದ್ಧತೆ ನಡೆಸಿದೆ. ಷೇರುಪೇಟೆ, ಬ್ಯಾಂಕ್, ಶಾಲೆ-ಕಾಲೇಜು, ಕಚೇರಿಗಳಿಗೆ ರಜೆ ಘೋಷಿಸಲಾಗಿದೆ. ಈ ಹೊತ್ತಲ್ಲೇ, ಪಾಲ್ಘರ್‌ನ ವಿರಾರ್‌ನಲ್ಲಿ ಬಿಜೆಪಿ ಪ್ರಧಾನ ಕಾರ್ಯದರ್ಶಿ ವಿನೋದ್ ತಾವ್ಡೆ ಮತದಾರರಿಗೆ ಹಣ ಹಂಚಿಕೆ ಮಾಡ್ತಿದ್ದಾರೆ ಎಂದು ಆರೋಪಿಸಿ ಬಿವಿಎ ಕಾರ್ಯಕರ್ತರು ಮುತ್ತಿಗೆ ಹಾಕಿ ಗದ್ದಲ ಎಬ್ಬಿಸಿದ್ದಾರೆ. ಬಿಜೆಪಿ ಡೈರಿ, ಹಣದ ಕವರ್‌ಗಳು ಸಿಕ್ಕಿವೆ ಎನ್ನಲಾಗಿದೆ. ಈ ವೀಡಿಯೋ ಹಂಚಿಕೊಂಡ ಕಾಂಗ್ರೆಸ್ ಆಕ್ರೋಶ ಹೊರಹಾಕಿದೆ. ಆಯೋಗಕ್ಕೆ ದೂರು ನೀಡಿದೆ. ಇದನ್ನು ಗಂಭೀರವಾಗಿ ಪರಿಗಣಿಸಿದ ಆಯೋಗ, ವಿನೋದ್ ತಾವ್ಡೆ ವಿರುದ್ಧ ಎಫ್‍ಐಆರ್ ದಾಖಲಿಸಿದೆ. ಆದರೆ, ಈ ಆರೋಪವನ್ನು ಬಿಜೆಪಿ ತಳ್ಳಿ ಹಾಕಿದೆ. ಇನ್ನು, ಬಿಜೆಪಿ, ಸಂಘಪರಿವಾರವನ್ನು ವಿಷದ ಹಾವಿಗೆ ಹೋಲಿಸಿದ್ದ ಮಲ್ಲಿಕಾರ್ಜುನ ಖರ್ಗೆಯನ್ನು ಹುಚ್ಚು ನಾಯಿಗೆ ಸಿ.ಟಿ.ರವಿ ಹೋಲಿಕೆ ಮಾಡಿದ್ದಾರೆ.