ರಾಮಮಂದಿರ ಕಟ್ಟೋದ್ರಿಂದ ಹಿಂದೂ ನಾಯಕನಾಗಲು ಸಾಧ್ಯವಿಲ್ಲ: ಮೋಹನ್ ಭಾಗವತ್.

32

ಮುಂಬೈ: ರಾಮಮಂದಿರ ಕಟ್ಟುವ ಮೂಲಕ ಹಿಂದೂ ನಾಯಕನಾಗಲು ಸಾಧ್ಯವಿಲ್ಲ ಎಂದು ಆರ್‌ಎಸ್‌ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಹೇಳಿದ್ದಾರೆ. ಪುಣೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ವಿಶ್ವಗುರು ಭಾರತ್ ಎಂಬ ಉಪನ್ಯಾಸ ಮಾಲಿಕೆಯಲ್ಲಿ ಮಾತನಾಡಿದ ಅವರು, ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣದ ಬಳಿಕ, ಹೊಸ ಮಂದಿರ-ಮಸೀದಿ ವಿವಾದಗಳನ್ನು ಉದ್ದೇಶಪೂರ್ವಕವಾಗಿ ಹುಟ್ಟುಹಾಕಲಾಗುತ್ತಿದೆ. ಇಂತಹ ವಿವಾದಗಳನ್ನು ಸೃಷ್ಟಿಸುವ ಮೂಲಕ ಕೆಲವರು ತಾವು ಹಿಂದೂ ನಾಯಕ ಎಂದು ಬಿಂಬಿಸಿಕೊಳ್ಳಲು ಪ್ರಯತ್ನಿಸುತ್ತಿದ್ದಾರೆ. ಆದರೆ ಇದರಿಂದ ಸಮಾಜಕ್ಕಾಗುವ ಹಾನಿಯನ್ನು ನಾವು ಅರಿಯಬೇಕಿದೆ. ರಾಮಮಂದಿರ ಕಟ್ಟುವ ಮೂಲಕ ಹಿಂದೂ ನಾಯಕನಾಗಲು ಸಾಧ್ಯವಿಲ್ಲ. ರಾಮಮಂದಿರ ಭಾರತೀಯರ ನಂಬಿಕೆ, ಹಿಂದೂಗಳ ನಂಬಿಕೆಯ ವಿಷಯವಾಗಿದೆ ಎಂದಿದ್ದಾರೆ. ದೇಶದಲ್ಲಿ ಯುಗಯುಗಾಂತರಗಳಿಂದ ವಿವಿಧ ಧರ್ಮ, ಜಾತಿ, ಮತ, ಮತ, ಸಿದ್ಧಾಂತಗಳ ಜನರು ಸೌಹಾರ್ದತೆಯಿಂದ ಬಾಳುತ್ತಿದ್ದಾರೆ. ಅದಕ್ಕಾಗಿಯೇ ನಾವು ವಿಭಜನೆಯ ಭಾಷೆಯನ್ನು ಬಿಟ್ಟು, ಅಲ್ಪಸಂಖ್ಯಾತ-ಬಹುಸಂಖ್ಯಾತ ತಾರತಮ್ಯ ಮರೆತು ಹೋರಾಡಬೇಕು. ನಮ್ಮ ಅಂತರ್ಗತ ಸಂಸ್ಕೃತಿಯ ಅಡಿಯಲ್ಲಿ ನಾವು ಒಂದಾಗಬೇಕು ಎಂದು ಸಲಹೆ ನೀಡಿದ್ದಾರೆ. ಭಾರತ ದೇಶವಿಂದು ಪ್ರಗತಿ ಹೊಂದುತ್ತಿದೆ, ಅದರಂತೆ ನೈತಿಕ ಹಾದಿಯಲ್ಲಿ ದಾಪುಗಾಲು ಹಾಕುವ ಅಗತ್ಯವಿದೆ. ಎಲ್ಲರನ್ನೂ ಒಳಗೊಳ್ಳುವ ಸಮಾಜಕ್ಕಾಗಿ ನಾವು ಪ್ರತಿಪಾದನೆ ಮಾಡಬೇಕಿದೆ. ಅದು ಸಂಭವಿಸಿದ್ರೆ, ಮುಂದಿನ 20 ವರ್ಷಗಳಲ್ಲಿ ನಾವು ವಿಶ್ವಗುರು ಸ್ಥಾನಮಾನ ಸಾಧಿಸಬಹುದು ಎಂದು ಹೇಳಿದ್ದಾರೆ. ದೇಶವು ಸಾಮರಸ್ಯದಿಂದ ಬದುಕಬಹುದು ಎಂಬುದನ್ನು ನಾವು ಜಗತ್ತಿಗೆ ತೋರಿಸಬೇಕಾಗಿದೆ. ಭಾರತೀಯ ಸಮಾಜದ ಬಹುತ್ವವನ್ನು ಎತ್ತಿ ಹಿಡಿಯುವ ಕೆಲಸ ಸಮಸ್ತ ಭಾರತೀಯರದ್ದಾಗಿದೆ. ಮಂದಿರ-ಮಸೀದಿ ವಿವಾದಗಳು ಈ ಪ್ರಯತ್ನಕ್ಕೆ ಮುಳುವಾಗಿವೆ. ರಾಮ ಮಂದಿರ ಹಿಂದೂಗಳ ನಂಬಿಕೆಯ ವಿಷಯವಾಗಿದ್ದರಿಂದ, ಅದರ ನಿರ್ಮಾಣಕ್ಕಾಗಿ ಸಂಘವು ಅವಿರತ ಪ್ರಯತ್ನ ನಡೆಸಿತು. ಆದರೆ ಈಗ ರಾಜಕೀಯ ಲಾಭಕ್ಕಾಗಿ ಹೊಸದಾಗಿ ಸೃಷ್ಟಿಸಲಾಗುತ್ತಿರುವ ಮಂದಿರ-ಮಸೀದಿ ವಿವಾದಗಳು ಸಂಘಕ್ಕೆ ಸ್ವೀಕಾರ್ಹವಲ್ಲ ಎಂದು ನುಡಿದಿದ್ದಾರೆ.