ಗಾಯಕಿ ಸಾದ್ವಿನಿ ಕೊಪ್ಪ ಅವರಿಂದ ನಡೆದ ಕರ್ನಾಟಕ ಶಾಸ್ತ್ರೀಯ ಸಂಗೀತ ಗಾಯನ ಕೇಳುಗರ ಗಮನ ಸೆಳೆಯಿತು.

55

ಚಿಕ್ಕಮಗಳೂರು ಫೆ.22: ಕರ್ನಾಟಕ ಸಂಗೀತದ ಪಿತಾಮಹ ಸಂತ ಶ್ರೀ ತ್ಯಾಗರಾಜರು ಮತ್ತು ದಾಸ ಶ್ರೇಷ್ಠ ಶ್ರೀ ಪುರಂದರ ದಾಸರ ಆರಾಧನೆ ಅಂಗವಾಗಿ ನಗರದ ಮಲೆನಾಡು ವಿದ್ಯಾಸಂಸ್ಥೆಯಲ್ಲಿ ಗಾಯಕಿ ಸಾದ್ವಿನಿ ಕೊಪ್ಪ ಅವರಿಂದ ಶುಕ್ರವಾರ ನಡೆದ ಕರ್ನಾಟಕ ಶಾಸ್ತ್ರೀಯ ಸಂಗೀತ ಗಾಯನ ಕೇಳುಗರ ಗಮನ ಸೆಳೆಯಿತು.
ವಿನಾಯಕ ಸ್ತುತಿ ಮತ್ತು ಶ್ರೀ ಮಹಾಗಣಪತಿಂ ಭಜೆ ಕೃತಿಯೊಂದಿಗೆ ಗಾನ ಯಾನವನ್ನು ಆರಂಭಿಸಿದ ಯುವ ಗಾಯಕಿ ಸಾದ್ವಿನಿ, ಸಂಗೀತ ಕ್ಷೇತ್ರದ ದಿಗ್ಗಜರಾದ ಶ್ರೀ ತ್ಯಾಗರಾಜರು, ಪುರಂದರದಾಸರು, ಮುತ್ತುಸ್ವಾಮಿ ದೀಕ್ಷಿತರು, ಶ್ಯಾಮ ಶಾಸ್ತ್ರಿಗಳ ಕೃತಿಗಳು ಸೇರಿದಂತೆ ಅನೇಕ ದಾಸವರೆಣ್ಯರ ಕೃತಿಗಳನ್ನು ತಮ್ಮ ಕಂಚಿನ ಕಂಠದಲ್ಲಿ ಹಾಡುವ ಮೂಲಕ ಕೇಳುಗರನ್ನು ಮೂರು ಗಂಟೆಗೂ ಅಧಿಕ ಕಾಲ ಹಿಡಿದಿಟ್ಟರು.
ದಾಸ ಕೀರ್ತನೆಗಳ ನಡುವೆ ಮರಾಠಿಯ ಅಭಂಗ್ ಗಳನ್ನೂ ಹಾಡುವ ಮೂಲಕ ಕೇಳುಗರ ಮನ ಗೆದ್ದರು. ವಯೋಲಿನ್ ನಲ್ಲಿ ಮೈಸೂರಿನ ವಿದ್ವಾನ್ ಯಶಸ್ವಿ, ಮೃದಂಗದಲ್ಲಿ ಬೆಂಗಳೂರಿನ ವಿದ್ವಾನ್ ನಾಗೇಂದ್ರ ಪ್ರಸಾದ್, ಕೀಬೋರ್ಡ್ ನಲ್ಲಿ ಸಾದ್ವಿನಿ ಅವರ ತಂದೆ ವಿದ್ವಾನ್ ಎಂ.ಕೆ. ಶ್ರೀನಿಧಿ, ರಿದಂ ಪ್ಯಾಡ್ ನಲ್ಲಿ ಬೆಂಗಳೂರಿನ ವಿದ್ವಾನ್ ಪ್ರಣವ್ ದತ್ ಗಮನ ಸೆಳೆದರು.                                                        ಇದೇ ವೇಳೆ ಸಾಧ್ವಿನಿ ಕೊಪ್ಪ ಮತ್ತು ಸಂಗೀತ ಶಿಕ್ಷಕಿ ಸುಮಾಪ್ರಸಾದ್ ಅವರನ್ನು ಮಲೆನಾಡು ವಿದ್ಯಾಸಂಸ್ಥೆಯಿಂದ ಸನ್ಮಾನಿಸಿ ಗೌರವಿಸಲಾಯಿತು. ಸನ್ಮಾನಕ್ಕೆ ಪ್ರತಿಕ್ರಿಯಿಸಿ ಮಾತನಾಡಿದ ಸಾದ್ವಿನಿ ಸಂಗೀತ ನಮ್ಮ ಸಂಸ್ಕೃತಿಯ ಮೂಲ ಬೇರು. ಅದನ್ನು ಕಲಿಯುವುದರಿಂದ ಅಥವಾ ಆಲಿಸುವುದರಿಂದ ಮಾನಸಿಕ ಆರೋಗ್ಯ, ಸುಖ, ಶಾಂತಿ, ನೆಮ್ಮದಿ ಲಭಿಸುತ್ತದೆ ಎಂದರು.
ಮಲೆನಾಡು ವಿದ್ಯಾಸಂಸ್ಥೆಯ ಗೌರವ ಕಾರ್ಯದರ್ಶಿ ಡಾ. ಡಿ.ಎಲ್. ವಿಜಯಕುಮಾರ್ ಮಾತನಾಡಿ ಸಂಗೀತ ಎಂದರೆ ಬರೀ ಹಾಡುಗಳಲ್ಲ. ಅವುಗಳಿಗೆ ಮಾಂತ್ರಿಕ ಶಕ್ತಿ ಇದೆ. ಸಂಗೀತದಲ್ಲಿರುವ ರಾಗಗಳು, ಸ್ವರಗಳು, ಕೇಳುಗರಿಗೆ ಅಲೌಕಿಕವಾದ ಅನುಭವ ನೀಡುತ್ತವೆ ಎಂದು ಹೇಳಿದರು. ಇಂದಿನ ಯುವ ಪೀಳಿಗೆ ಪಾಶ್ಚಾತ್ಯ ಸಂಸ್ಕೃತಿಯ ವ್ಯಾಮೋಹದಿಂದ ಹೊರ ಬರಬೇಕು. ದೇಶೀಯ ಸಂಗೀತವನ್ನು ಕಲಿಯಬೇಕು. ಆ ಮೂಲಕ ನಮ್ಮ ಸಂಸ್ಕೃತಿಯನ್ನು ಉಳಿಸಿ ಬೆಳೆಸಬೇಕು ಎಂದು ಕಿವಿಮಾತು ಹೇಳಿದರು.
ಆರಾಧನಾ ಮಹೋತ್ಸವ ಸಮಿತಿಯ ಅಧ್ಯಕ್ಷ ಎಸ್. ಶಂಕರನಾರಾಯಣ ಭಟ್, ಸಂಸ್ಥೆಯ ನಿರ್ದೇಶಕಿ ಜಯಶ್ರೀ ಜೋಶಿ, ಶೈಕ್ಷಣಿಕ ಸಲಹೆಗಾರ ಕೆ. ಎನ್.ಮಂಜುನಾಥ ಭಟ್, ಕಚೇರಿ ವ್ಯವಸ್ಥಾಪಕಿ ಶ್ರೀ ಲಕ್ಷ್ಮೀ ಉಪಸ್ಥಿತರಿದ್ದರು.