ಚಿಕ್ಕಮಗಳೂರು: ಬ್ಯಾಂಕುಗಳು ಗ್ರಾಹಕ ಸ್ನೇಹಿಯಾಗಿ ಕಾರ್ಯ ನಿರ್ವಹಿಸಬೇಕು ಎಂದು ಕೆನರಾ ಬ್ಯಾಂಕ್ ಮೌಲ್ಯಮಾಪಕರ ಸಂಘದ ರಾಜ್ಯಾಧ್ಯಕ್ಷ ರುದ್ರಯ್ಯ ಆಚಾರ್ಯ ಸಲಹೆ ಮಾಡಿದರು. ನಗರದ ಐಡಿಬಿಐ ಬ್ಯಾಂಕ್ನಲ್ಲಿ ಸೋಮವಾರ ನಡೆದ ಸಂಸ್ಥಾಪನಾ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.ಬ್ಯಾಂಕಿನ ಅಧಿಕಾರಿಗಳು ಗ್ರಾಹಕರನ್ನು ಸ್ನೇಹಿತರಂತೆ ಕಾಣಬೇಕು ಅವರೊಡನೆ ಸೌಜನ್ಯದಿಂದ ವರ್ತಿಸಬೇಕು ಆಗ ಮಾತ್ರ ಬ್ಯಾಂಕುಗಳು ಬೆಳೆಯಲು ಸಾಧ್ಯವಾಗುತ್ತದೆ ಎಂದರು.ಗ್ರಾಹಕರು ಬ್ಯಾಂಕುಗಳಿಂದ ಪಡೆದ ಸಾಲವನ್ನು ಸದ್ಬಳಕೆ ಮಾಡಿಕೊಳ್ಳಬೇಕು ಸಕಾಲಕ್ಕೆ ಸಾಲ ಮರುಪಾವತಿಸುವ ಮೂಲಕ ಸಂಸ್ಥೆಯನ್ನು ಉಳಿಸಬೇಕು ಎಂದು ಕಿವಿಮಾತು ಹೇಳಿದರು.
ಅಧ್ಯಕ್ಷತೆ ವಹಿಸಿ ಮಾತನಾಡಿದ ಶಾಖಾ ಪ್ರಬಂಧಕ ಮಲ್ಲಿಕಾರ್ಜುನ್ ಕಳೆದ 9 ವರ್ಷಗಳ ಅವಧಿಯಲ್ಲಿ ಬ್ಯಾಂಕ್ 450 ಕೋಟಿಗೂ ಅಧಿಕ ವ್ಯವಹಾರ ನಡೆಸಿದೆ, 95 ಕೋಟಿ ರೂ ಠೇವಣಿ ಹೊಂದಿದ್ದು, 365 ಕೋಟಿ ರೂ ಸಾಲ ವಿತರಿಸಿದೆ ಎಂದು ತಿಳಿಸಿದರು.ಸಂಸ್ಥಾಪನಾ ದಿನದ ಪ್ರಯುಕ್ತ ಗ್ರಾಹಕರಿಗೆ ಸಿಹಿ ವಿತರಿಸಲಾಯಿತು, ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯ ಜಿಲ್ಲಾ ನಿರ್ದೇಶಕಿ ಗೀತಾ, ನ್ಯಾಯವಾದಿ ಹಳೇಕೋಟೆ ತೇಜಸ್ವಿ, ಬ್ಯಾಂಕಿನ ಸಹಾಯಕ ಪ್ರಬಂಧಕರಾದ ಶಶಾಂಕ್, ಧನರಾಜ್, ಮೊದಲ ಗ್ರಾಹಕ ದಕ್ಷಿಣಾಮೂರ್ತಿ ಉಪಸ್ಥಿತರಿದ್ದರು.










