ಬಳ್ಳಾರಿ : ಸಾಲಬಾಧೆ ತಾಳಲಾಗದೆ ಪೋಷಕರಿಬ್ಬರು ತಮ್ಮ ಇಬ್ಬರು ಪುಟ್ಟ ಮಕ್ಕಳನ್ನು ಕೆರೆಗೆ ತಳ್ಳಿರುವ ಘಟನೆ ಜಿಲ್ಲೆಯ ಕೂಡ್ಲಿಗೆ ತಾಲ್ಲೂಕಿನ ರಾಮದುರ್ಗ ಕೆರೆಯಲ್ಲಿ ನಡೆದಿದೆ. ಖುಷಿ(3) ಹಾಗೂ ಚಿರು(1) ಮೃತ ಮಕ್ಕಳು ಎಂದು ಗುರುತಿಸಲಾಗಿದ್ದು, ಕೊಟ್ಟೂರು ತಾಲ್ಲೂಕಿನ ಮಲ್ಲನಾಯಕನಹಳ್ಳಿ ಗ್ರಾಮದ ಚಿರಂಜೀವಿ ಹಾಗೂ ಪತ್ನಿ ನಂದಿನಿ ಈ ಕೃತ್ಯ ಎಸಗಿದ್ದಾರೆ. ಸಾಲ ಮಾಡಿಕೊಂಡಿದ್ದ ಚಿರಂಜೀವಿ ಅವರು ಕಳೆದ ಕೆಲವು ತಿಂಗಳಿನಿಂದ ಪತ್ನಿಯ ಮನೆಯಲ್ಲಿ ವಾಸವಾಗಿದ್ದರು. ಆದರೆ ಸಾಲಬಾಧೆ ತಾಳಲಾಗದೆ ಕುಟುಂಬ ಸಮೇತರಾಗಿ ಕೆರೆಗೆ ಹಾರಿ ಆತ್ಮಹತ್ಯೆ ಮಾಡಿಕೊಳ್ಳಲು ಮುಂದಾಗಿದ್ದರು. ಮೊದಲು ಪೋಷಕರು ಮಕ್ಕಳಿಬ್ಬರನ್ನು ಕೆರೆಗೆ ತಳ್ಳಿದ್ದಾರೆ. ಬಳಿಕ ಇಬ್ಬರು ಆತ್ಮಹತ್ಯೆಗೆ ಯತ್ನಿಸಿದ್ದು, ಆದರೆ ನೀರಿಗೆ ಹಾರಲು ಭಯಗೊಂಡು ಹಿಂದೇಟು ಹಾಕಿದ್ದಾರೆ. ಬಳಿಕ ಪತಿ ಚಿರಂಜೀವಿ ಪತ್ನಿಯನ್ನು ಕೆರೆಯ ಬಳಿಯೇ ಬಿಟ್ಟು ಪರಾರಿಯಾಗಿದ್ದು, ಘಟನಾ ಸ್ಥಳಕ್ಕೆ ಗುಡೇಕೋಟೆ ಠಾಣಾ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.










