ಹೈದರಾಬಾದ್ : ಕೊರೊನಾ ವೈರಸ್ ತಗುಲಿದೆ ಎಂದು ಶಂಕಿಸಿ ವ್ಯಕ್ತಿಯೊಬ್ಬರು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಆಂಧ್ರಪ್ರದೇಶದ ಚಿತ್ತೂರಿನಲ್ಲಿ ನಡೆದಿದೆ. ಶೇಷಮ್ನಾಯುದಕಂಡ್ರಿಗ ಗ್ರಾಮದ ನಿವಾಸಿ ಬಾಲಕೃಷ್ಣ(51) ಆತ್ಮಹತ್ಯೆಗೆ ಶರಣಾದ ವ್ಯಕ್ತಿ ಎಂದು ಗುರುತಿಸಲಾಗಿದ್ದು, ಬಾಲಕೃಷ್ಣ ಅವರು ಹೃದಯಕ್ಕೆ ಸಂಬಂಧಿಸಿದ ಸಮಸ್ಯೆಯಿಂದ ಬಳಲುತ್ತಿದ್ದು, ಹೀಗಾಗಿ ಚಿಕಿತ್ಸೆ ಪಡೆಯಲು ತಿರುಪತಿಯ ರುಯಾ ಆಸ್ಪತ್ರೆಗೆ ತೆರಳಿದ್ದರು. ಈ ವೇಳೆ ಬಾಲಕೃಷ್ಣ ಅವರು ತಪಾಸಣೆ ನಡೆಸಿದ ವೈದ್ಯರು ನಿಮ್ಮಲ್ಲಿ ಯಾವುದೋ ವೈರಸ್ನ ಲಕ್ಷಣ ಇದೆ ಎಂದು ಹೇಳಿದ್ದು, ಇದರಿಂದ ಬಾಲಕೃಷ್ಣ ಅವರು ಎರಡು ದಿನಗಳಿಂದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಬಾನುವಾರ ತಮ್ಮ ನಿವಾಸಕ್ಕೆ ತೆರಳಿದ್ದರು. ಈ ವೇಳೆ ಕುಟುಂಬಸ್ಥರ ಬಳಿ ನನಗೆ ಕೊರೊನಾ ವೈರಸ್ ಇದೆ ನನ್ನ ಬಳಿ ಯಾರು ಬರಬೇಡಿ. ನನ್ನ ಕೈಯನ್ನು ಯಾರು ಮುಟ್ಟಬೇಡಿ ಎಂದು ಹೇಳುತ್ತಿದ್ದರು. ಬಳಿಕ ಬಾಲಕೃಷ್ಣ ಅವರು ಸೋಮವಾರ ನಾನು ಹೊಲಕ್ಕೆ ಹೋಗಿ ಬರುತ್ತೇನೆ ಎಂದು ಹೇಳಿ ಹೊಲದಲ್ಲಿ ತನ್ನ ತಾಯಿಯ ಸಮಾಧಿ ಬಳಿ ಇದ್ದ ಮರಕ್ಕೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದು, ಈ ಕುರಿತು ಸ್ಥಳೀಯ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.










