ಕಳಸ: ಮೂಡಿಗೆರೆ ತಾಲೂಕು ತೋಟದೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕಗ್ಗನಾಳದ ಪಡೀಲ್ ಎಂಬಲ್ಲಿ ಮನೆಯೊಂದರ ಮೇಲೆ ಶುಕ್ರವಾರದ ತಡರಾತ್ರಿ ಮರವೊಂದು ಉರುಳಿ ಬಿದ್ದ ಪರಿಣಾಮ ಐದು ವರ್ಷದ ಮಗು ಸೇರಿದಂತೆ ಮೂವರಿಗೆ ಗಾಯಗಳಾಗಿವೆ. ಪ್ರಸಾದ್ ,ಪವಿತ್ರ ,ಪ್ರಜ್ಞಾ(5) ಗಾಯಗೊಂಡವರು ಹೋಬಳಿಯಾದ್ಯಂತ ಸುರಿದ ಮಳೆ ಶುಕ್ರವಾರದ ರಾತ್ರಿ ಮತ್ತಷ್ಟು ಬಿರುಸುಗೊಂಡಿತ್ತು. ಗಾಳಿಯೊಂದಿಗೆ ಸುರಿದ ಮಳೆಯಿಂದ ರಾತ್ರಿ 1.30ರ ಸಮಯದಲ್ಲಿ ಗಾಢವಾಗಿ ನಿದ್ರಿಸುತ್ತಿದ್ದ ಪ್ರಸಾದ್ ಅವರ ಮನೆಗೆ ಬೃಹತ್ ಗಾತ್ರದ ಮರ ಬಿದ್ದಿದೆ.ಮರ ಬಿದ್ದ ಶಬ್ದ ಕೇಳಿದ ಕೂಡಲೇ ಅಕ್ಕ ಪಕ್ಕದ ಮನೆಯವರು ಬಂದು ನೋಡಿದಾಗ ಮನೆಯ ಮೇಲೆ ಮರ ಬಿದ್ದು ಒಳಗೆ ಮೂವರು ಸಿಲುಕಿ ಕೊಂಡಿದ್ದರು.ಮರ ಮಗುವಿನ ಮೇಲಿದ್ದು,ಪ್ರಯಾಸ ಪಟ್ಟು ಮಗುವನ್ನು ಹೊರಗೆಳೆದಿದ್ದಾರೆ.ಪ್ರಜ್ಞಾಹೀನ ಸ್ಥಿತಿಯಲ್ಲಿದ್ದ ಮಗುವನ್ನು ಸೇರಿದಂತೆ ಇತರರನ್ನು ಕಳಸದ ಸರ್ಕಾರಿ ಆಸ್ಪತ್ರೆಗೆ ದಾಖಲು ಮಾಡಿದ್ದಾರೆ.ಪ್ರಸಾದ್ ಮತ್ತು ಪವಿತ್ರರವರಿಗೆ ಸಣ್ಣ ಪುಟ್ಟ ಗಾಯಗಳಾಗಿವೆ. ಮಗುವಿನ ಕೈ ಮುರಿದು ಹೋಗಿದ್ದು ತೀವ್ರ ಗಾಯಗಳಾಗಿರುವ ಮಗುವನ್ನು ಕಾರ್ಕಳ ಖಾಸಗಿ ಆಸ್ಪತ್ರೆಗೆ ದಾಖಲು ಮಾಡಿದ್ದಾರೆ.ಘಟನೆಯಿಂದ ಮನೆಯಲಿದ್ದ ಬೀರು, ಟಿ.ವಿ, ಬಟ್ಟೆ ಬರೆ,ಮನೆ ಬಳಕೆಯ ಸಾಮಾಗ್ರಿಗಳು ಮಣ್ಣುಪಾಲಾಗಿವೆ .ಸುದ್ಧಿ ತಿಳಿದ ಕೂಡಲೇ ಕಳಸ ನಾಡ ಕಛೇರಿ ರೆವಿನ್ಯೂ ಇನ್ಸ್ಪೆಕ್ಟರ್ ರತ್ನಾಕರ್, ಗ್ರಾಮಲೆಕ್ಕಾಧಿಕಾರಿ ಕವನ ಸ್ಥಳಕ್ಕೆ ಭೇಟಿ ನೀಡಿ ಸ್ಥಳ ಪರಿಶೀಲನೆ ನಡೆಸಿದ್ದಾರೆ.