ಚಿಕ್ಕಮಗಳೂರು: ನಗರದ ಇತಿಹಾಸ ಪ್ರಸಿದ್ದ ಶ್ರೀ ಬೋಳರಾಮೇಶ್ವರ ದೇವಾಲಯದಲ್ಲಿ ವಾರ್ಷಿಕ ಕಾರ್ತೀಕ ದೀಪೋತ್ಸವ ನೂರಾರು ಭಕ್ತರ ನಡುವೆ ಗುರುವಾರ ವೈಭವದಿಂದ ನಡೆಯಿತು.
ದೀಪೋತ್ಸವದ ಪ್ರಯುಕ್ತ ದೇವಾಲಯದ ಅಧಿದೇವತೆಗಳಿಗೆ ಅಭಿಷೇಕ, ವಿಶೇಷ ಪೂಜೆ, ಅಲಂಕಾರ ಜರುಗಿತು. ರಾತ್ರಿ 7.30 ರಿಂದ ನೂರಾರು ಭಕ್ತರು ದೇವಾಲಯದ ಆವರಣದಲ್ಲಿ ಸಹಸ್ರಾರು ಹಣತೆಗಳನ್ನು ಹಚ್ಚಿ ಸಂಭ್ರಮಿಸಿದರು.
ಮಹಾ ಮಂಗಳಾರತಿಯೊಂದಿಗೆ ಪ್ರಧಾನ ಅರ್ಚಕ ಡಿ.ಎಸ್.ರಾಮನಾಥಶಾಸ್ತ್ರಿ ಅವರು 8 ಗಂಟೆಗೆ ದೇವಾಲಯದ ಮುಂಭಾಗದಲ್ಲಿ ಕಾರ್ತಿಯನ್ನು ಬೆಳಗಿದರು. ನಂತರ ಅಧಿದೇವತೆಗಳಿಗೆ ರಕ್ಷೆಯನ್ನು ಹಚ್ಚಲಾಯಿತು, ಪ್ರಸಾದ ವಿನಿಯೋಗ ಮಾಡಲಾಯಿತು.










