ಬೆಂಗಳೂರನ್ನು 2ನೇ ರಾಜಧಾನಿಯನ್ನಾಗಿ ಘೋಷಿಸುವಂತೆ ಪ್ರಧಾನಿಗೆ ಪತ್ರ ಬರೆದ ಸಚಿವ ದೇಶಪಾಂಡೆ

677

ಬೆಂಗಳೂರು: ಭಾರತಕ್ಕೆ ತುರ್ತಾಗಿ ಎರಡನೇ ರಾಜಧಾನಿಯ ಅಗತ್ಯವಿದೆ ಮತ್ತು ಇಂತಹ ಮಹತ್ವದ ಹೊಣೆ ನಿಭಾಯಿಸಲು ಬೆಂಗಳೂರು ಅತ್ಯುತ್ತಮ ನಗರ ಆಗಿದೆ. ಹೀಗಾಗಿ ಬೆಂಗಳೂರನ್ನು 2ನೇ ರಾಜಧಾನಿ ಯನ್ನಾಗಿ ಘೋಷಿಸುವಂತೆ ಪ್ರಧಾನಿ ಮೋದಿಯವರಿಗೆ ಸಚಿವ ದೇಶಪಾಂಡೆ ಅವರು ಪತ್ರ ಬರೆದಿದ್ದಾರೆ.

ದಕ್ಷಿಣ ಭಾರತದ ಸಮಗ್ರ ಅಭಿವೃದ್ಧಿ ಹಾಗೂ ದೇಶದ ಆಡಳಿತದಲ್ಲಿ ದಕ್ಷಿಣ ಭಾರತವೂ ಸಕ್ರಿಯವಾಗಿ ಭಾಗವಹಿಸಲು ಅನುವಾಗುವಂತೆ ಬೆಂಗಳೂರು ನಗರವನ್ನು ದೇಶದ ಎರಡನೇ ರಾಜಧಾನಿಯಾಗಿ ಮಾಡಬೇಕು. ಎರಡನೇ ರಾಜಧಾನಿಯಾಗಲು ಎಲ್ಲಾ ರೀತಿಯ ಅರ್ಹತೆಗಳೂ ಸಿಲಿಕಾನ್ ಸಿಟಿ ಬೆಂಗಳೂರಿಗೆ ಇವೆ ಎಂದು ಬೃಹತ್ ಕೈಗಾರಿಕಾ ಸಚಿವ ಆರ್.ವಿ. ದೇಶಪಾಂಡೆ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿದ್ದಾರೆ.

ಜ.12ರಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿರುವ ಸಚಿವ ಆರ್.ವಿ. ದೇಶಪಾಂಡೆ, ಬೆಂಗಳೂರು ನಗರವನ್ನು ಎರಡನೇ ರಾಜಧಾನಿಯಾಗಿ ಮಾಡಿದರೆ ದೇಶಕ್ಕಾಗುವ ಅನುಕೂಲಗಳು ಹಾಗೂ 2ನೇ ರಾಜಧಾನಿಯಾಗಲು ಬೆಂಗಳೂರಿಗೆ ಇರುವ ಅರ್ಹತೆಗಳ ಪಟ್ಟಿಯನ್ನೂ ಮಾಡಿ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಕಳುಹಿಸಿದ್ದಾರೆ.

ಭಾರತಕ್ಕೆ ತುರ್ತಾಗಿ ಎರಡನೇ ರಾಜಧಾನಿಯ ಅಗತ್ಯವಿದೆ ಮತ್ತು ಇಂತಹ ಮಹತ್ವದ ಹೊಣೆ ನಿಭಾಯಿಸಲು ಬೆಂಗಳೂರು ಅತ್ಯುತ್ತಮ ನಗರ. ಭಾರತದಂತಹ ವಿಶಾಲ ರಾಷ್ಟ್ರವನ್ನು ಒಂದು ನಗರದಿಂದ ನಿರ್ವಹಣೆ ಮಾಡಲು ಸಾಧ್ಯವಿಲ್ಲ. ವಿಶೇಷವಾಗಿ ಸರ್ಕಾರವು ಆಡಳಿತ, ರಚನಾತ್ಮಕ ಸುಧಾರಣೆ, ರಾಷ್ಟ್ರ ಮರುನಿರ್ಮಾಣ, ಅಂತರಾಷ್ಟ್ರೀಯ ಸಹಭಾಗಿತ್ವಕ್ಕೆ ಸಂಬಂಧಿಸಿದಂತೆ ಮಾದರಿಯಾಗಿ ಹಾಗೂ ಅಮೂಲಾಗ್ರ ಬದಲಾವಣೆಗೆ ಸಿದ್ಧತೆ ನಡೆಸುತ್ತಿದೆ.

ಇಂತಹ ಹೊತ್ತಿನಲ್ಲಿ ಬೆಂಗಳೂರನ್ನು ಎರಡನೇ ರಾಜಧಾನಿಯನ್ನಾಗಿ ಮಾಡುವ ಅಗತ್ಯತೆ ಹೆಚ್ಚಿದೆ ಎಂದು ಪ್ರತಿಪಾದಿಸಿದ್ದಾರೆ. ರಾಷ್ಟ್ರೀಯ ದೃಷ್ಟಿಕೋನದಲ್ಲಿ ದಕ್ಷಿಣ ಭಾರತದ ಸಕ್ರಿಯ ಪಾಲುದಾರಿಕೆಗೆ ಹೊಸ ರಾಜಧಾನಿಯ ಅಗತ್ಯವಿದೆ. ಸುಪ್ರೀಂ ಕೋರ್ಟ್‌ನ ಎರಡನೇ ಪೀಠ ಸ್ಥಾಪನೆ, ಕೇಂದ್ರ ನಾಗರಿಕ ಸೇವಾ ಆಯೋಗದ ಎರಡನೇ ಕಚೇರಿ ಸ್ಥಾಪನೆ, ಸಂಸತ್‌ನ ಚಳಿಗಾಲದ ಅಧಿವೇಶನವನ್ನು ಬೆಂಗಳೂರಿನಲ್ಲಿ ನಡೆಸುವುದು ಮತ್ತಿತರ ಅಂಶಗಳನ್ನು ಪರಿಗಣಿಸಬಹುದು. ದಕ್ಷಿಣ ಭಾರತೀಯರನ್ನು ರಾಜಕೀಯ ಪಾಲುದಾರಿಕೆ ಮತ್ತು ಆಡಳಿತಾತ್ಮಕ ನೀತಿ ರಚನೆಗಳಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳುವಂತೆ ಮಾಡಲು ಇದು ಸಕಾರಾತ್ಮಕ ಆರಂಭ ಆಗಬೇಕು ಎಂದು ದೇಶಪಾಂಡೆ ಒತ್ತಾಯಿಸಿದ್ದಾರೆ.

ಅಷ್ಟೇ ಅಲ್ಲದೆ ಈ ಬಗ್ಗೆ ಕಾಂಗ್ರೆಸ್ ಪಕ್ಷದ ರಾಷ್ಟ್ರಾಧ್ಯಕ್ಷ ರಾಹುಲ್‌ಗಾಂಧಿ ಅವರಿಗೂ ಕೂಡ ಮನವಿ ಸಲ್ಲಿಸಿದ್ದಾರೆ. ಬೆಂಗಳೂರನ್ನು ಎರಡನೇ ರಾಜಧಾನಿ ಮಾಡುವಂತೆ ಕೇಂದ್ರಕ್ಕೆ ಬೇಡಿಕೆ ಇಡುವಂತೆ ಸಿದ್ದರಾಮಯ್ಯ ಅವರಿಗೂ ದೇಶಪಾಂಡೆ ಮನವಿ ಮಾಡಿದ್ದಾರೆ ಎನ್ನಲಾಗಿದೆ.