ಮೂಡಿಗೆರೆ : ತೇಜಸ್ವಿಯವರು ವೈವಿಧ್ಯಮಯ ವ್ಯಕ್ತಿತ್ವದಿಂದಾಗಿ ವಿವಿಧ ಕ್ಷೇತ್ರಗಳಲ್ಲಿ ತಮ್ಮ ಛಾಪನ್ನು ಮೂಡಿಸಿದ್ದರು : ಡಾ.ಬಿ.ಎಲ್ ಶಂಕರ್.

146
firstsuddi

ಕೊಟ್ಟಿಗೆಹಾರ : ಕೆ.ಪಿ ಪೂರ್ಣಚಂದ್ರ ತೇಜಸ್ವಿ ಅವರ ಬದುಕು ಬರಹ ಚಿಂತನೆಗಳ ಸಾಕಾರಗೊಳಿಸುವ ನಿಟ್ಟಿನಲ್ಲಿ ತೇಜಸ್ವಿ ಪ್ರತಿಷ್ಠಾನದಲ್ಲಿ ಚಟುವಟಿಕೆಗಳು ನಿರಂತರವಾಗಿರಲಿ ಎಂದು ಕೊಟ್ಟಿಗೆಹಾರದ ಕೆ.ಪಿ ಪೂರ್ಣಚಂದ್ರ ತೇಜಸ್ವಿ ಅವರ ಪ್ರತಿಷ್ಠಾನದ ಅಧ್ಯಕ್ಷ ಡಾ.ಬಿ.ಎಲ್ ಶಂಕರ್ ಅವರು ಹೇಳಿದರು.
ಕೊಟ್ಟಿಗೆಹಾರದ ಕೆ.ಪಿ ಪೂರ್ಣಚಂದ್ರ ತೇಜಸ್ವಿ ಅವರ ಪ್ರತಿಷ್ಠಾನದಲ್ಲಿ ನಡೆದ ತೇಜಸ್ವಿ ಓದು ಮತ್ತು ಮನೆಮನೆಗೆ ತೇಜಸ್ವಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.
ತೇಜಸ್ವಿಯವರು ವೈವಿಧ್ಯಮಯ ವ್ಯಕ್ತಿತ್ವದಿಂದಾಗಿ ವಿವಿಧ ಕ್ಷೇತ್ರಗಳಲ್ಲಿ ತಮ್ಮ ಛಾಪನ್ನು ಮೂಡಿಸಿದ್ದರು. ಪ್ರತಿಷ್ಠಾನದಲ್ಲಿ ಕಲೆ, ಸಾಹಿತ್ಯ, ಪೋಟೋಗ್ರಫಿ, ಚಾರಣ ಸೇರಿದಂತೆ ವಿವಿಧ ವಿಷಯಗಳಿಗೆ ಸಂಬಂಧಿಸಿದಂತೆ ಕಾರ್ಯಕ್ರಮಗಳು ಮುಂದಿನ ದಿನಗಳಲ್ಲಿ ನಡೆಯಲಿದೆ ಎಂದರು.
ಕನ್ನಡ ಮತ್ತು ಸಂಸ್ಕೃತಿ ಇಲಾಖೆ ನಿರ್ದೇಶಕ ಡಾ ರಮೇಶ್ ಅವರು ಮಾತನಾಡಿ, ತಂತ್ರಜ್ಞಾನಗಳನ್ನು ಬಳಸಿಕೊಂಡು ತೇಜಸ್ವಿಯವರ ಚಿಂತನೆಗಳನ್ನು ತಲುಪಿಸುವ ನಿಟ್ಟಿನಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ನೇರಪ್ರಸಾರದ ಮೂಲಕ ತೇಜಸ್ವಿ ಓದು ಕಾರ್ಯಕ್ರಮ ನಡೆಯಲಿದೆ. ಪ್ರತಿ ಹದಿನೈದು ದಿನಕ್ಕೊಮ್ಮೆ ಕಾರ್ಯಕ್ರಮ ನಡೆಯಲಿದೆ. ವಿಷಯತಜ್ಞರು ತೇಜಸ್ವಿ ಓದು ಕಾರ್ಯಕ್ರಮದಲ್ಲಿ ತೇಜಸ್ವಿ ಕೃತಿಗಳ ಕುರಿತು ಮಾತನಾಡಲಿದ್ದಾರೆ. ನವೆಂಬರ್ 29 ರಂದು ಸಂಜೆ 5-30 ಕ್ಕೆ ಡಾ ಹೆಚ್.ಎಸ್. ಸತ್ಯನಾರಾಯಣ ಅವರು ತೇಜಸ್ವಿ ಅವರ ಕರ್ವಾಲೊ ಕಾದಂಬರಿಯ ಬಗ್ಗೆ ಮಾತನಾಡಲಿದ್ದಾರೆ ಎಂದರು.
ಕನ್ನಡ ರಾಜ್ಯೋತ್ಸವದ ಪ್ರಯುಕ್ತ ತೇಜಸ್ವಿ ಅವರ ಪುಸ್ತಕಗಳಿಗೆ ಶೇ 15 ರಷ್ಟು ರಿಯಾಯಿತಿ ಇದ್ದು, ಓದುಗರು ಪ್ರತಿಷ್ಠಾನವನ್ನು ಸಂಪರ್ಕಿಸಿದರೆ ತೇಜಸ್ವಿ ಪುಸ್ತಕವನ್ನು ಅಂಚೆಯಲ್ಲಿ ಮನೆಗೆ ತಲುಪಿಸುವ ಕಾರ್ಯಕ್ರಮ ಇದಾಗಿದೆ. ಅಂಚೆ ಮತ್ತು ರವಾನೆ ವೆಚ್ಚ ಉಚಿತವಾಗಿರುತ್ತದೆ. ಪ್ರತಿ ತಿಂಗಳ ಕೊನೆಯ, ಎರಡನೇ ಅಥವಾ ನಾಲ್ಕನೇ ಶನಿವಾರ ಚಾರಣ ಕಾರ್ಯಕ್ರಮ ನಡೆಯಲಿದೆ ಎಂದರು.
ಈ ಸಂದರ್ಭದಲ್ಲಿ ಕುವೆಂಪು ವಿಶ್ವವಿದ್ಯಾಲಯದ ಕುಲಪತಿಗಳಾದ ಪ್ರೋ. ವೀರಭದ್ರಪ್ಪ, ಕೆ.ಪಿ ಪೂರ್ಣಚಂದ್ರ ತೇಜಸ್ವಿ ಪ್ರತಿಷ್ಠಾನದ ಸದಸ್ಯರಾದ ರಾಜೇಶ್ವರಿ ತೇಜಸ್ವಿ, ಪ್ರದೀಪ್ ಕೆಂಜಿಗೆ, ಆರ್. ರಾಘವೇಂದ್ರ, ಉಪ ಅರಣ್ಯ ಸಂರಕ್ಷಣಾಧಿಕಾರಿ ಜಗನ್ನಾಥ್, ಬಣಕಲ್ ಠಾಣೆ ಪಿಎಸ್‍ಐ ಶ್ರೀನಾಥ್ ರೆಡ್ಡಿ, ಸಹಾಯಕ ಪರಿಸರ ಅಧಿಕಾರಿ ಶ್ವೇತಾ, ಚಾರಣ ಕಾರ್ಯಕ್ರಮದ ಸಂಯೋಜಕ ಬಾಪುದಿನೇಶ್, ತಾಂತ್ರೀಕ ಸಹಾಯಕ ಪ್ರಜ್ವಲ್, ಪ್ರತಿಷ್ಠಾನದ ನಿರ್ವಾಹಕ ಆಕರ್ಷ್, ಸಿಬ್ಬಂದಿ ಸತೀಶ್ ಇದ್ದರು.