ಬೆಂಗಳೂರು: ಸುದ್ದಿಗಾರರೊಂದಿಗೆ ಮಾತನಾಡಿದ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಜಾರಕಿಹೊಳಿ ಬ್ರದರ್ಸ್ ಹಾಗೂ ಸರ್ಕಾರದ ನಡುವೆ ಯಾವ ಗೊಂದಲಗಳು ಇಲ್ಲ. ಬಿಜೆಪಿ ಅಧಿಕಾರದ ಆಸೆಗೆ ಆಪರೇಷನ್ ಕಮಲ ಮಾಡಲು ಮುಂದಾಗಿದ್ದು, ಬಿಜೆಪಿಯವರ ಹಗಲು ಕನಸು ನನಸಾಗುವುದಿಲ್ಲ. ನಮ್ಮ ಯಾವ ಶಾಸಕರು ಕೂಡ ಪಕ್ಷ ಬಿಡುವುದಿಲ್ಲ. ಕಾಂಗ್ರೆಸ್ ಪಕ್ಷದ ಎಲ್ಲಾ ಶಾಸಕರು ಶಿಸ್ತುಬದ್ಧ ಸೈನಿಕರಂತಿದ್ದು, ಯಾರಿಗೂ ಅಸಮಾಧಾನ ಇಲ್ಲ. ಜಾರಕಿಹೊಳಿ ಸಹೋದರರು ಸಚಿವ ಸ್ಥಾನ ಕೇಳುವುದರಲ್ಲಿ ತಪ್ಪೇನಿದೆ? ಸರ್ಕಾರಿ ಕಾರು ಬಿಟ್ಟು ಖಾಸಗಿ ಕಾರನ್ನು ಬಳಸುವುದು ತಪ್ಪ? ಶಾಸಕರಾದ ಎಂ.ಬಿ.ಪಾಟೀಲ್, ಭೀಮಾನಾಯಕ್, ಪರಮೇಶ್ವರ್ ನಾಯಕ್ ಸೇರಿದಂತೆ ಹಲವರು ಸಚಿವ ಸ್ಥಾನದ ಆಕಾಂಕ್ಷಿಗಳಾಗಿದ್ದಾರೆ, ಈ ಬಗ್ಗೆ ಹೈಕಮಾಂಡ್ ನಿರ್ಧರಿಸುತ್ತದೆ. ಸಮಸ್ಯೆ ಇಲ್ಲ ಎಂದ ಮೇಲೆ ಸಂಧಾನ ಮಾಡುವುದು, ಬಗೆಹರಿಸುವುದು ಎಲ್ಲಿಂದ ಬರುತ್ತದೆ ಎಂದು ಮಾಧ್ಯಮದವರನ್ನೇ ಪ್ರಶ್ನಿಸಿದ್ದಾರೆ.










