ಅಮರನಾಥ ಯಾತ್ರೆ ಪುನರಾರಂಭ- ಯಾತ್ರಾರ್ಥಿಗಳ ಅನುಕೂಲಕ್ಕಾಗಿ ಹೆಲಿಕಾಪ್ಟರ್ ಸೇವೆ ಲಭ್ಯ…

54
firstsuddi

ಶ್ರೀನಗರ: ಜಮ್ಮು ಮತ್ತು ಕಾಶ್ಮೀರದಲ್ಲಿ ಮಳೆಯ ಪ್ರಮಾಣ ತಗ್ಗಿ, ಹವಾಮಾನ ಪರಿಸ್ಥಿತಿ ಸುಧಾರಿಸಿದ್ದು ಈ ಹಿನ್ನೆಲೆಯಲ್ಲಿ ಬಾಲ್ಟಾಲ್ ಬೇಸ್‌ನಿಂದ ಅಮರನಾಥ ಯಾತ್ರೆಯನ್ನು ಮತ್ತೆ ಪುನರಾರಂಭಗೊಳಿಸಲಾಗಿದೆ.

ಯಾತ್ರಾರ್ಥಿಗಳ ಅನುಕೂಲಕ್ಕಾಗಿ ಹೆಲಿಕಾಪ್ಟರ್ ಸೇವೆಯನ್ನು ಆರಂಭಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ನಿನ್ನೆ ಮಧ್ಯಾಹ್ನದಿಂದ ಪಹಲ್ಗಾಮ್ ಬೇಸ್‌ನಿಂದ ಯಾತ್ರೆಯನ್ನು ಪುನರಾರಂಭ ಮಾಡಲಾಗಿತ್ತು. ಹವಾಮಾನ ಪರಿಸ್ಥಿತಿ ಸೂಕ್ತವಾಗಿದ್ದ ಹಿನ್ನೆಲೆ 6491 ಮಂದಿ ಯಾತ್ರಾರ್ಥಿಗಳು ಪವಿತ್ರ ಗುಹೆಯ ದರ್ಶನ ಪಡೆದರು. ಈಗ ಬಾಲ್ಟಾಲ್ ಭಾಗದಲ್ಲೂ ಪರಿಸ್ಥಿತಿ ಸುಧಾರಿಸಿದ ಹಿನ್ನೆಲೆ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ.

116 ಸಾಧುಗಳು, 6 ಸಾಧ್ವಿಗಳು ಸೇರಿ ಈವರೆಗೂ 93,929 ಯಾತ್ರಾರ್ಥಿಗಳು ಪವಿತ್ರ ಗುಹೆಯ ದರ್ಶನ ಪಡೆದಿದ್ದಾರೆ. ಲೆಫ್ಟಿನೆಂಟ್ ಗವರ್ನರ್ ಮನೋಜ್ ಸಿನ್ಹಾ ಹಿರಿಯ ಅಧಿಕಾರಿಗಳು ಮತ್ತು ಅಮರನಾಥ ಯಾತ್ರಾ ಆಡಳಿತ ಮಂಡಳಿಯ ಜೊತೆಗೆ ಸಭೆ ನಡೆಸಿದ್ದು, ರಾಷ್ಟ್ರೀಯ ಹೆದ್ದಾರಿ ವಿಸ್ತರಣೆ ಮತ್ತು ಅಗತ್ಯ ಮೂಲ ಸೌಕರ್ಯಗಳನ್ನು ಒದಗಿಸುವ ಬಗ್ಗೆ ಚರ್ಚಿಸಿದ್ದಾರೆ. ಜುಲೈ 1ರಿಂದ ಆರಂಭವಾಗಿರುವ ಅಮರನಾಥ ಯಾತ್ರೆ ಆಗಸ್ಟ್ 31ರವರೆಗೂ ನಡೆಯಲಿದೆ.