ನವದೆಹಲಿ: 2024ರ ಜ.22ರಂದು ಅಯೋಧ್ಯೆಯಲ್ಲಿ ಭವ್ಯ ರಾಮಮಂದಿರ ಉದ್ಘಾಟನೆಗೆ ಸಜ್ಜಾಗುತ್ತಿರುವ ಹೊತ್ತಿನಲ್ಲೇ ರಾಮನ ದರ್ಶನಕ್ಕಾಗಿ ಮುಸ್ಲಿಂ ಮಹಿಳೆಯೊಬ್ಬರು ಪಾದಯಾತ್ರೆ ಕೈಗೊಂಡಿದ್ದಾರೆ.
ಮುಸ್ಲಿಂ ಯುವತಿ ಶಬನಮ್ ಮುಂಬೈನಿಂದ ಅಯೋಧ್ಯೆಗೆ ಪ್ರಯಾಣ ಬೆಳೆಸಿದ್ದಾರೆ. ತನ್ನ ಸಹಚರರಾದ ರಮಣ್ ರಾಜ್ ಶರ್ಮಾ ಮತ್ತು ವಿನೀತ್ ಪಾಂಡೆ ಜೊತೆಯಲ್ಲಿ ಶಬನಮ್ 1,425 ಕಿಲೋಮೀಟರ್ ಕಾಲ್ನಡಿಗೆ ಮೂಲಕವೇ ಅಯೋಧ್ಯೆ ತಲುಪಲು ಹೊರಟಿದ್ದಾರೆ.
ಶಬನಮ್ ಮುಸ್ಲಿಂ ಧರ್ಮೀಯರಾಗಿದ್ದರೂ, ಭಗವಾನ್ ರಾಮನ ಮೇಲೆ ಅಚಲ ಭಕ್ತಿ ಹೊಂದಿದ್ದಾರೆ. ತನ್ನ ಇಬ್ಬರು ಸಹಚರರ ಜೊತೆಗೆ ಈಗಾಗಲೇ ಕಾಲ್ನಡಿಗೆ ಯಾತ್ರೆ ಆರಂಭಿಸಿರುವ ಶಬನಮ್ ಇದೀಗ ಮಧ್ಯಪ್ರದೇಶದ ಸಿಂಧವಾ ಪ್ರದೇಶ ತಲುಪಿದ್ದಾರೆ. ಪ್ರತಿದಿನ 25ರಿಂದ 30 ಕಿ.ಮೀ ದೂರ ಕ್ರಮಿಸುತ್ತಿರುವ ಶಬನಮ್, ಮಂದಿರ ಉದ್ಘಾಟನೆ ವೇಳೆಗೆ ಅಯೋಧ್ಯೆ ತಲುಪಬೇಕೆಂಬ ಗುರಿ ಏನೂ ಇಲ್ಲ. ಇದು ನನ್ನಲ್ಲಿನ ಅಧ್ಯಾತ್ಮದ ಪರಿಪೂರ್ಣತೆಯ ಅನ್ವೇಷಣೆಯ ಯತ್ನವಷ್ಟೇ ಎಂದು ಹೇಳಿದ್ದಾರೆ.
ಭಗವಾನ್ ಶ್ರೀರಾಮನನ್ನು ಪೂಜಿಸಲು ಕೇವಲ ಹಿಂದೂವೇ ಆಗಿರಬೇಕು ಎಂಬ ಅಗತ್ಯವಿಲ್ಲ. ಒಬ್ಬ ಉತ್ತಮ ಮನುಷ್ಯನಾಗಿದ್ದರೆ ಸಾಕು. ಶ್ರೀರಾಮ ಯಾವುದೇ ನಿರ್ದಿಷ್ಟ ಧರ್ಮ ಮತ್ತು ಪ್ರದೇಶಕ್ಕೆ ಸೀಮಿತವಲ್ಲ. ಆತ ಎಲ್ಲರಿಗೂ ಸೇರಿದವನು. ನನ್ನ ಯಾತ್ರೆ ವೇಳೆ ಮುಸ್ಲಿಮರು ಕೂಡ ಜೈಶ್ರೀರಾಮ್ ಎಂದು ನನಗೆ ಬೆಂಬಲ ನೀಡಿದ್ದಾರೆ. ಈ ಯಾತ್ರೆ, ಕೇವಲ ಪುರುಷರು ಮಾತ್ರವೇ ಇಂಥ ಸುದೀರ್ಘ ಯಾತ್ರೆಯನ್ನು ಕೈಗೊಳ್ಳಬಹುದು ಎಂಬ ಅಪನಂಬಿಕೆ ದೂರ ಮಾಡುವ ಉದ್ದೇಶವನ್ನೂ ಹೊಂದಿದೆ ಎಂದು ಶಬನಮ್ ಹೇಳಿದ್ದಾರೆ.
ಶ್ರೀರಾಮನ ಮೇಲೆ ಅಪಾರ ಭಕ್ತಿ ಹೊಂದಿರುವ ಶಬನಮ್ ಧರ್ಮವನ್ನೂ ಮೀರಿ ಸೌಹಾರ್ದತೆ ಮೆರೆದು ಮಾದರಿಯಾಗಿದ್ದಾರೆ. ಅದಾಗ್ಯೂ ಶಬನಮ್ ನಡೆಗೆ ಸಾಮಾಜಿಕ ಮಾಧ್ಯಮದಲ್ಲಿ ಕೆಲವರು ವಿರೋಧವನ್ನು ವ್ಯಕ್ತಪಡಿಸಿದ್ದಾರೆ.
ಶಬನಮ್ ಯಾತ್ರೆಗೆ ಯಾವುದೇ ಸಮಸ್ಯೆಯಿಲ್ಲ. ಆಕೆಗೆ ಸೂಕ್ತ ಭದ್ರತೆ ಒದಗಿಸುವುದರ ಜೊತೆಗೆ, ಊಟ ಮತ್ತು ವಸತಿ ವ್ಯವಸ್ಥೆಯಲ್ಲಿಯೂ ಪೊಲೀಸರು ಪ್ರಮುಖ ಪಾತ್ರ ವಹಿಸಿದ್ದಾರೆ. ಮಹಾರಾಷ್ಟ್ರದ ಸೂಕ್ಷ್ಮ ಪ್ರದೇಶಗಳ ಮೂಲಕ ಹಾದುಹೋಗುವಾಗ ಪೊಲೀಸರು ಅಗತ್ಯ ರಕ್ಷಣೆ ನೀಡಿದ್ದಾರೆ.










