ಉಡುಪಿ : ಜೂನ್ 7 ರ ಬಳಿಕ ಜಿಲ್ಲೆಯಲ್ಲಿ ಸಂಪೂರ್ಣ ಲಾಕ್ ಡೌನ್ ಅಗತ್ಯವಿಲ್ಲ ಎಂದು ಶಾಸಕ ರಘುಪತಿ ಭಟ್ ಅಭಿಪ್ರಾಯಪಟ್ಟಿದ್ದಾರೆ.
ಈ ಬಗ್ಗೆ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಜಿಲ್ಲೆಯಲ್ಲಿ ಕೋವಿಡ್ ಪಾಸಿಟಿವಿಟಿ ರೇಟ್ ಕಡಿಮೆಯಾಗಿದ್ದು, ಸದ್ಯ 18-19 ಇದೆ. ಸಂಪೂರ್ಣ ಲಾಕ್ ಡೌನ್ ಬದಲು ಸಾರ್ವಜನಿಕ ಸಭೆ ಸಮಾರಂಭಗಳಿಗೆ ನಿರ್ಬಂಧ ಹಾಕುವುದು ಉತ್ತಮ. ಈಗಾಗಲೇ ಜಿಲ್ಲೆಯ ಜನರ ಆರ್ಥಿಕತೆಯ ಮೇಲೆ ದೊಡ್ಡ ಹೊಡೆತ ಬಿದ್ದಿದೆ. ಕೋವಿಡ್ ಬಗ್ಗೆ ಜಿಲ್ಲೆಯ ಜನತೆಯಲ್ಲಿ ಜಾಗೃತಿ ಮಾಡಿದ್ದು ಮುಂದಿನ ಮೂರು ತಿಂಗಳೂ ಎಲ್ಲಾ ಸಭೆ ಸಮಾರಂಭಗಳಿಗೆ ನಿರ್ಬಂಧ ಹಾಕಬೇಕು ಎಂದರು.
ಇನ್ನೂ ಲಾಕ್ ಡೌನ್ ಮುಂದುವರೆಸಿದರೆ ಯಾವುದೇ ಉಪಯೋಗವಿಲ್ಲ. ಪಾಸಿಟಿವಿಟಿ ರೇಟ್ ಹೆಚ್ಚಿರುವ ಜಿಲ್ಲೆಗಳಲ್ಲಿ ಲಾಕ್ ಡೌನ್ ಮುಂದೆವರೆಸಬಹುದು. ಕೊರೊನಾ ನಿಯಂತ್ರಣಕ್ಕೆ ಬರುತ್ತಿರುವುದು ಕೇವಲ ನಮ್ಮ ಪ್ರಯತ್ನದಿಂದ ಅಲ್ಲ ಈ ಸಾಂಕ್ರಾಮಿಕ ರೋಗ ಒಂದು ಬಾರಿ ಎಲ್ಲಾ ಕಡೆ ವ್ಯಾಪಿಸಿದೆ. ಇಮ್ಯೂನಿಟಿಯಿಂದ ಈಗ ತನ್ನಿಂದ ತಾನೇ ನಿಯಂತ್ರಣಕ್ಕೆ ಬಂದಿದೆ. ಆದರೆ ಜನರು ಲಾಕ್ ಡೌನ್ ಮುಗಿಯಿತು ಎಂದು ಮೈ ಮರೆಯಬಾರದು. ಶೇಕಡಾ 70 ರಷ್ಟು ಲಸಿಕೆ ಆಗುವವರೆಗೆ ಜನ ಬಹಳ ಜಾಗೃತಿಯಾಗಿರಬೇಕು ಎಂದು ಅವರು ಹೇಳಿದ್ದಾರೆ.










