ಚಿಕ್ಕಮಗಳೂರು : ತಮಿಳುನಾಡಿನ ಕೊಯಮತ್ತೂರಿನಲ್ಲಿ ಇತ್ತೀಚೆಗೆ ನಡೆದ ರಾಷ್ಟ್ರಮಟ್ಟದ ಫಾರ್ಮುಲಾ 4 ಎಲ್.ಜಿ.ಬಿ ಸಿಂಗಲ್ ಸೀಟರ್ ಇಂಡಿಯನ್ ನ್ಯಾಶನಲ್ ಚಾಂಪಿಯನ್ಶಿಪ್ ರೇಸ್ನಲ್ಲಿ ಮೂಡಿಗೆರೆಯ ಯುವಕ ಡಿ.ಯು.ಪರೀಕ್ಷಿತ್ ರನ್ನರ್ ಆಗಿ ಹೊರಹೊಮ್ಮಿದ್ದಾರೆ.
ಜೆ.ಕೆ. ಟಯರ್ಸ್ ಮೋಟಾರ್ ಸ್ಪೋಟ್ಸ್ ಆಯೋಜಿಸಿದ್ದ ಈ ರೇಸ್ನಲ್ಲಿ 15 ರಾಷ್ಟ್ರಮಟ್ಟದ ಸ್ಪರ್ಧಾಳುಗಳು ಭಾಗವಹಿಸಿದ್ದು, 77 ಅಂಕಗಳಿಸುವ ಮೂಲಕ ಡೆಹ್ರಾಡೂನ್ನ ಅನುಶ್ರಿಯಾ ಗುಲಾಟಿ ಚಾಂಪಿಯನ್ನಾಗಿ ಹೊರಹೊಮ್ಮಿದರೆ 72 ಅಂಕಗಳ ಮೂಲಕ ಮಲೆನಾಡಿನ ಯುವಕ ಪರೀಕ್ಷಿತ್ ರನ್ನರ್ ಆದರು.
ರೇಸ್ನ ನಂತರ ನಡೆದ ವರ್ಣ ರಂಜಿತ ಸಮಾರಂಭದಲ್ಲಿ ದೇಶದ ವೇಗದ ಚಾಲಕ ಗೌರವ್ ಗಿಲ್ ವಿಜೇತರಿಗೆ ಟ್ರೋಫಿ ವಿತರಿಸಿದರು.
ಕಾಫಿ ಮಂಡಳಿ ಮಾಜಿ ಉಪಾಧ್ಯಕ್ಷ ಡಿ.ಕೆ.ಉದಯಶಂಕರ್ ಹಾಗೂ ಕೆ.ವಿ.ಧನಲಕ್ಷ್ಮೀ ಅವರ ಪುತ್ರನಾಗಿರುವ ಮೂಡಿಗೆರೆಯ ಯುವಕ ಪರೀಕ್ಷಿತ್ ಈಗಾಗಲೇ ರಾಷ್ಟ್ರಮಟ್ಟದ 4 ಹಾಗೂ ರಾಜ್ಯ ಮಟ್ಟದ 3 ಸಿಂಗಲ್ ಸೀಟರ್ ರೇಸ್ನಲ್ಲಿ ವಿಜೇತರಾಗುವ ಮೂಲಕ ದೇಶದ ಭರವಸೆಯ ವೇಗದ ಚಾಲಕ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.










