ರಾಮನಗರ: ನನ್ನ ಕೈ ಹಿಡಿದುಕೊಂಡು ಕೊನೆಗೆ ಕೈ ಎತ್ತಿರಲಿಲ್ಲವೇ?. ಕೈ ಎತ್ತೋದು ಕೈ ಇಳಿಸೋದು ಆಯಾಯ ಸಂದರ್ಭಕ್ಕೆ ತಕ್ಕಂತೆ ನಡೀತಿರುತ್ತವೆ ಎಂದು ದಾವಣಗೆರೆಯಲ್ಲಿ ನಡೆದ ಸಿದ್ದರಾಮೋತ್ಸವ ಕಾರ್ಯಕ್ರಮದಲ್ಲಿ ಡಿಕೆಶಿ ಹಾಗೂ ಸಿದ್ದರಾಮಯ್ಯ ಕೈ ಎತ್ತಿ ಹಿಡಿದು ಒಗ್ಗಟ್ಟಿನ ಮಂತ್ರ ಜಪಿಸಿದ್ದ ವಿಚಾರಕ್ಕೆ ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಟಾಂಗ್ ನೀಡಿದರು.
ರಾಮನಗರದ ಚನ್ನಪಟ್ಟಣ ತಾಲೂಕಿನ ಕಣ್ವ ಜಲಾಶಯಕ್ಕೆ ಹೆಚ್ಡಿಕೆ ದಂಪತಿ ಬಾಗಿನ ಅರ್ಪಿಸಿದರು. ನಂತರ ಸುದ್ದಿಗಾರರೊಂದಿಗೆ ಮಾತನಾಡಿ, ನಾನು ಕೈ ಎತ್ತಿಸಿಕೊಂಡು ಬೆನ್ನಿಗೆ ಚೂರಿ ಹಾಕಿಸಿಕೊಂಡಿಲ್ವಾ..?. ಅದೇ ರೀತಿ ಇಬ್ಬರೂ ಕೈ ಎತ್ತಿ ಜನರಿಗೆ ತೋರಿಸಿದ್ದಾರೆ. ಇದೆಲ್ಲವನ್ನೂ ನಾನು ಕೂಡಾ ಮೈತ್ರಿ ಸರ್ಕಾರ ಇದ್ದಾಗ ನೋಡಿದ್ದೇನೆ. ಯಾರ ಬೆನ್ನಿಗೆ ಯಾರು ಚೂರಿ ಹಾಕ್ತಾರೆ ಅಂತ ಆನಂತರ ನೋಡೊಣ ಎಂದರು.
ಗೃಹ ಸಚಿವ ಆರಗ ಜ್ಞಾನೇಂದ್ರಗೆ ಅಮಿಶ್ ಶಾ ವಾರ್ನಿಂಗ್ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ಕೇವಲ ಆರಗ ಜ್ಞಾನೇಂದ್ರಗೆ ಅಲ್ಲ ಇಡೀ ಸರ್ಕಾರಕ್ಕೆ ವಾರ್ನಿಂಗ್ ಕೊಡಬೇಕು. ರಾಜ್ಯ ಎಲ್ಲಾ ಮಂತ್ರಿಗಳಿಗೂ ವಾರ್ನಿಂಗ್ ಕೊಡಬೇಕು. ರೈತರಿಗೆ ಕೊಡುವ ಸಬ್ಸಿಡಿಗೂ ಮಂತ್ರಿಗಳು 8 ಪರ್ಸೆಂಟ್ ಕಮಿಷನ್ ಕೇಳ್ತಿದ್ದಾರೆ. ರಾಜ್ಯ ಲೂಟಿ ಆಗ್ತಿದೆ ಎಂದು ಹೇಳಿದರು.










