ಬೆಂಗಳೂರು: ಲೈಟ್ ಕಂಬಕ್ಕೆ ಬೈಕ್ ಡಿಕ್ಕಿಯಾಗಿ ಇಬ್ಬರು ಸವಾರರು ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಇಂದು ಮುಂಜಾನೆ 3.30ರ ಸಮಯದಲ್ಲಿ ನಗರದ ಯಶವಂತಪುರದ ಆರ್ಎಮ್ಸಿ ಯಾರ್ಡ್ ಬಳಿ ನಡೆದಿದೆ.
ಬೈಕ್ ಸವಾರರಾದ ಮನಮೋಹನ್(31), ನಿಖಿಲ್(25) ಮೃತ ದುರ್ದೈವಿಗಳು. ಬಿಎಂಡಬ್ಲೂ ಬೈಕ್ನಲ್ಲಿ ಡ್ರಂಕ್ ಅಂಡ್ ಡ್ರೈವ್ ಮಾಡಿ ಹೆಲ್ಮೆಟ್ ಧರಿಸದೆ, ಅತಿವೇಗದಿಂದ ಯಶವಂತಪುರದಿಂದ ಆರ್ಎಮ್ಸಿ ಯಾರ್ಡ್ ರೋಡ್ ಕಡೆಗೆ ಯುವಕರು ಬೈಕ್ ಚಲಾಯಿಸಿಕೊಂಡು ಬರುತ್ತಿದ್ದರು.
ಮದ್ಯದ ಅಮಲಿನಲ್ಲಿದ್ದ ಯುವಕರಿಗೆ ಬೈಕ್ ನಿಯಂತ್ರಣ ಸಿಗದೆ ಕಂಬಕ್ಕೆ ಡಿಕ್ಕಿ ಹೊಡೆದಿದೆ. ಡಿಕ್ಕಿ ಹೊಡೆದ ರಭಸಕ್ಕೆ ಇಬ್ಬರೂ ಬೈಕ್ನಿಂದ ಹಾರಿಬಿದ್ದಿದ್ದು, ತೀವ್ರ ರಕ್ತಸ್ರಾವವಾಗಿ ಸ್ಥಳದಲ್ಲೇ ಕೊನೆಯುಸಿರೆಳೆದಿದ್ದಾರೆ. ಸ್ನೇಹಿತರ ಜೊತೆ ಪಾರ್ಟಿ ಮುಗಿಸಿ ಮನೆಗೆ ವಾಪಸ್ ಬರುತ್ತಿದ್ದಾಗ ಈ ಘಟನೆ ನಡೆದಿದೆ.
ಇಬ್ಬರ ಮೃತದೇಹವನ್ನು ಎಮ್ಎಸ್ ರಾಮಯ್ಯ ಆಸ್ಪತ್ರೆಗೆ ರವಾನೆ ಮಾಡಲಾಗಿದೆ. ಈ ಸಂಬಂಧ ಯಶವಂತಪುರ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.










