ಶಿವಮೊಗ್ಗ: ತಾಲೂಕಿನ ಮುದ್ದಿನಕೊಪ್ಪದ ಟ್ರೀ ಪಾರ್ಕ್ನಲ್ಲಿ ಜಿಂಕೆ ಪ್ರತಿಮೆ ಉರುಳಿಬಿದ್ದು 6 ವರ್ಷದ ಬಾಲಕಿ ಸಾವನ್ನಪ್ಪಿದ ಘಟನೆ ನಡೆದಿದೆ.
ನಗರದ ಹರೀಶ್, ಲಕ್ಷ್ಮೀ ದಂಪತಿ ಪುತ್ರಿ ಸಮೀಕ್ಷಾ ಮೃತ ರ್ದುದೈವಿ. ಹರೀಶ್ ಅವರ ಪತ್ನಿ ತಮ್ಮ ಇಬ್ಬರು ಮಕ್ಕಳನ್ನು ಕರೆದುಕೊಂಡು ಟ್ರೀ ಪಾರ್ಕ್ಗೆ ಬಂದಿದ್ದರು. ಹಿರಿ ಮಗಳು ಸಮೀಕ್ಷಾ ಜಿಂಕೆ ಪ್ರತಿಮೆ ಬಳಿ ಆಟವಾಡುತ್ತಿದ್ದಳು. ಈ ಸಂದರ್ಭದಲ್ಲಿ ಪ್ರತಿಮೆ ಮೈಮೇಲೆ ಬಿದ್ದಿದ್ದು, ಗಂಭೀರ ಗಾಯಗೊಂಡಿದ್ದಳು. ಸ್ಥಳದಲ್ಲಿ ತಕ್ಷಣಕ್ಕೆ ಆಂಬ್ಯುಲೆನ್ಸ್ ವ್ಯವಸ್ಥೆ ಇಲ್ಲದೇ ಇದ್ದ ಕಾರಣ, ತಾಯಿ ಮಗುವನ್ನೆತ್ತಿಕೊಂಡು ಸಾಗರ ರಸ್ತೆಯಲ್ಲಿ ಹೋಗುತ್ತಿದ್ದ ವಾಹನ ಸವಾರರಲ್ಲಿ ಸಹಾಯ ಕೇಳಿದ್ದಾರೆ. ಆದರೆ ಯಾರೂ ಕೂಡ ಸಹಾಯ ನೀಡಿರಲಿಲ್ಲ. ಅಷ್ಟರಲ್ಲಿ ಸ್ಥಳಕ್ಕೆ ಬಾಲಕಿಯ ತಂದೆ ಹರೀಶ್ ಆಗಮಿಸಿದ್ದು, ಮೆಗ್ಗಾಂವ್ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾರೆ. ಆಸ್ಪತ್ರೆ ತಲುಪುವಷ್ಟರಲ್ಲಿ ಬಾಲಕಿ ಸಾವನ್ನಪ್ಪಿದ್ದಾಳೆ.
ಈ ಕುರಿತು ತುಂಗಾ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.










