ಬೆಂಗಳೂರು : ಪಾರ್ಟಿ ಮುಗಿಸಿ ಮನೆಗೆ ತೆರಳುತ್ತಿದ್ದ ಯುವಕನ ಮೇಲೆ ದುಷ್ಕರ್ಮಿಗಳು ಹಲ್ಲೆ ನಡೆಸಿ ಹತ್ಯೆ ಮಾಡಿರುವ ಘಟನೆ ಆರ್.ಟಿ ನಗರದಲ್ಲಿ ನಡೆದಿದೆ. ಲೋಕೇಶ್ ಮೃತ ಯುವಕ ಎಂದು ಗುರುತಿಸಲಾಗಿದೆ. ಕಾಲ್ ಸೆಂಟರ್ ನಲ್ಲಿ ಕಾರ್ಯನಿರ್ವಹಿಸುತ್ತಿದ್ದ ಲೋಕೇಶ್ ಅವರು ನಿನ್ನೆ ಕೆಲಸಕ್ಕೆ ರಜೆಯಿದ್ದ ಹಿನ್ನೆಲೆ ತನ್ನ ಗೆಳೆಯರೊಂದಿಗೆ ಬಾರ್ ನಲ್ಲಿ ಪಾರ್ಟಿ ಮುಗಿಸಿ ತನ್ನ ಬೈಕ್ನಲ್ಲಿ ಮನೆಗೆ ವಾಪಸ್ಸಾಗುತ್ತಿದ್ದ ವೇಳೆ 5 ಜನ ದುಷ್ಕರ್ಮಿಗಳ ಗುಂಪು ಯುವಕನ ಮೇಲೆ ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿದ್ದಾರೆ. ಕೂಡಲೇ ಯುವಕ ದಾಳಿಯಿಂದ ತಪ್ಪಿಸಿಕೊಂಡು ನೂರು ಮೀಟರ್ ದೂರ ಓಡಿ ಹೋಗಿದ್ದರು. ಆದರೆ ಯುವಕ ತೀವ್ರ ರಕ್ತಸ್ರಾವದಿಂದ ರಸ್ತೆಯಲ್ಲೇ ಕುಸಿದು ಬಿದ್ದಿದ್ದು, ಇದನ್ನು ಗಮನಿಸಿದ ಸ್ಥಳೀಯರು ಕೂಡಲೇ ಯುವಕನನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದರೆ ಯುವಕ ಚಿಕಿತ್ಸೆ ಫಲಕಾರಿಯಾಗದೇ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದು, ಈ ಕುರಿತು ಆರ್.ಟಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.










