ಚಿಕ್ಕಮಗಳೂರು: ಬಡತನದ ಬೇಗೆಯಿಂದ ಹೊರಬಂದು ಸಮಾಜದ ಮುಖ್ಯ ವಾಹಿನಿಗೆ ಸೇರ್ಪಡೆಗೊಳ್ಳಲು ಶಿಕ್ಷಣವಂತರಾಗುವುದು ಅತ್ಯಗತ್ಯ ಎಂದು ಶಿಕ್ಷಣ ಇಲಾಖೆ ನೌಕರರ ಡಾ.ರಾಧಾಕೃಷ್ಣನ್ ವಿವಿಧೋದ್ದೇಶ ಸಹಕಾರ ಸಂಘದ ಅಧ್ಯಕ್ಷ ಎಲ್ ಜಿ ಪರಮೇಶ್ವರಪ್ಪ ಹೇಳಿದರು.
ನಗರದ ಬಸವನಹಳ್ಳಿಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಿನ್ನೆ ನಡೆದ ಸಂಘದ ಸರ್ವ ಸದಸ್ಯರ ಮಹಾಸಭೆಯಲ್ಲಿ ಎಸ್ಎಸ್ಎಲ್ಸಿ ಮತ್ತು ಪಿಯುಸಿಯಲ್ಲಿ ಅತಿ ಹೆಚ್ಚು ಅಂಕ ಗಳಿಸಿದ ಸದಸ್ಯರ ಮಕ್ಕಳನ್ನು ಸನ್ಮಾನಿಸಿ ಅವರು
ಮಾತನಾಡಿದರು.
ಬಡತನದಿಂದ ಹೊರಬರಲು ಶಿಕ್ಷಣ ಒಂದು ಪ್ರಮುಖವಾದ ಅಸ್ತ್ರ ವಿದ್ಯಾವಂತರನ್ನು ಮಾತ್ರ ಸಮಾಜ ಗೌರವಿಸಿ ಆಧರಿಸುತ್ತದೆ ಎಂದ ಅವರು ಮಕ್ಕಳು ಇದನ್ನು ಅರಿತು ಶ್ರದ್ಧೆ ಮತ್ತು ಪರಿಶ್ರಮದಿಂದ ವಿದ್ಯಾರ್ಜನೆ ಮಾಡಬೇಕು ಎಂದು ಕಿವಿ ಮಾತು ಹೇಳಿದರು.
ಶಿಕ್ಷಣ ಇಲಾಖೆ ನೌಕರರ ಡಾಕ್ಟರ್ ರಾಧಾಕೃಷ್ಣನ್ ವಿವಿಧೋದ್ದೇಶ ಸಹಕಾರ ಸಂಘ ಪ್ರಸಕ್ತ ಸಾಲಿನಲ್ಲಿ 1.35.523ರೂ ನಿವ್ವಳ ಲಾಭಗಳಿಸಿದ್ದು, ಲಾಭಾಂಶದಲ್ಲಿ ಶೇಕಡ ಐದರಷ್ಟು ಡಿವಿಡೆಂಟನ್ನು ಸದಸ್ಯರಿಗೆ ನೀಡಲಾಗುವುದು ಎಂದು ತಿಳಿಸಿದರು.
ಸಂಘದ ಕಾರ್ಯದರ್ಶಿ ಬಸವ ಕುಮಾರ್ ವಾರ್ಷಿಕ ವರದಿಯನ್ನು ನಿರ್ದೇಶಕ ಹೆಚ್ ಜಿ ಪ್ರಸನ್ನಕುಮಾರ್ ಆಯವ್ಯಯವನ್ನು ಮಂಡಿಸಿದರು.
ಎಸ್ಎಸ್ಎಲ್ ಸಿ ಮತ್ತು ಪಿಯುಸಿಯಲ್ಲಿ ಅತಿ ಹೆಚ್ಚು ಅಂಕ ಗಳಿಸಿದ ಸಂಘದ ಸದಸ್ಯರ ಮಕ್ಕಳನ್ನು ಸಮಾರಂಭದಲ್ಲಿ ಸನ್ಮಾನಿಸಲಾಯಿತು ಜಿಲ್ಲಾ ಪ್ರಶಸ್ತಿಗೆ ಪಾತ್ರರಾದ ಶಿಕ್ಷಕರನ್ನು ಗೌರವಿಸಲಾಯಿತು.
ಸಂಘದ ಉಪಾಧ್ಯಕ್ಷೆ ವಿಜಯಲಕ್ಷ್ಮಿ ನಿರ್ದೇಶಕರಾದ ಎಲ್.ಟಿ ಅಜ್ಜಯ್ಯ ಕೃಷ್ಣಪ್ಪ ಲೀಲಾವತಿ ಲೋಕೇಶ್ ಇಸ್ಮಾಯಿಲ್ ಎ.ಕೆ ಮಾನಪ್ಪ ಆರ್.ರವಿ ಶಿಕ್ಷಕಿ ಅನ್ನಪೂರ್ಣ ಕಟ್ಟಿ ಉಪಸ್ಥಿತರಿದ್ದರು.










