ಬಣಕಲ್: ಇಂಟರ್ನೆಟ್ ಸಮಸ್ಯೆಯಿಂದ ಪಡಿತರ ಪಡೆಯಲು ಪರದಾಟ, ಸಾರ್ವಜನಿಕರ ಆಕ್ರೋಶ…

811
firstsuddi

ಬಣಕಲ್: ಕೊಟ್ಟಿಗೆಹಾರದ ಪಡಿತರ ವಿತರಣಾ ಕೇಂದ್ರದಲ್ಲಿ ಇಂಟರ್ನೆಟ್ ಸಮಸ್ಯೆ ಇರುವುದರಿಂದ ಪ್ರತಿ ತಿಂಗಳು ಗ್ರಾಹಕರು ಪಡಿತರ ಸಾಮಗ್ರಿ ಪಡೆಯಲು ಗಂಟೆಗಟ್ಟಲೆ ಕಾಯುವ ಪರಿಸ್ಥಿತಿ ಎದುರಾಗಿದ್ದು, ಇದರಿಂದ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಪಡಿತರ ಸಾಮಗ್ರಿ ಪಡೆಯಲು ಬೆರಳಚ್ಚು ನೀಡಬೇಕಿದ್ದು ಆದರೆ ಇಂಟರ್ನೆಟ್ ಇಲ್ಲದಿರುವುದರಿಂದ ದಿನವಿಡಿ ಕಾಯಬೇಕಿದೆ. ಹೆಚ್ಚಾಗಿ ಕೂಲಿ ಕಾರ್ಮಿಕರೇ ಇರುವುದರಿಂದ ಪಡಿತರದಾರರು ಪಡಿತರ ವಿತರಣಾ ಕೇಂದ್ರಕ್ಕೆ ಹೋದ ದಿನ ಇಂಟರ್ನೆಟ್ ಬರದಿದ್ದರೆ ಮರುದಿನ ಮತ್ತೆ ಹೋಗುವಂತಾಗಿದೆ. ಇದರಿಂದಾಗಿ ಜನರು ಬೇಸತ್ತು ಹೋಗಿದ್ದಾರೆ.
ಪಡಿತರ ವಿತರಕ ನಾಗೇಶ್ ಮಾತನಾಡಿ ಕೆಲವು ವಾರಗಳಲ್ಲಿ ಇಂಟರ್ನೆಟ್ ಸರಿ ಇರುತ್ತದೆ. ಕೊಟ್ಟಿಗೆಹಾರದಲ್ಲಿ ವಾರದ ಸೋಮವಾರ ಹಾಗೂ ಗುರುವಾರ ಪಡಿತರ ನೀಡಲಾಗುತ್ತದೆ. ಆದರೆ ಇಂಟರ್ನೆಟ್ ಅವ್ಯವಸ್ಥೆಯಿಂದ ತಿಂಗಳ ಪಡಿತರವನ್ನು ವಿಳಂಬ ಮಾಡಿ ವಿತರಿಸುವ ಪರಿಸ್ಥಿತಿ ತಲೆದೋರಿದೆ. ಜನರು ಕೆಲಸ ಬಿಟ್ಟು ಪಡಿತರ ಪಡೆಯಲು ಸಾಲು ನಿಂತರೂ ಮೂವರಿಗೆ ಪಡಿತರ ವಿತರಣೆ ಮಾಡಬೇಕಾದರೆ ಇಂಟರ್ನೆಟ್ ಸಮಸ್ಯೆಯಿಂದ ಅರ್ದಗಂಟೆಗೂ ಅಧಿಕ ಕಾಲ ಸಮಯ ಹಿಡಿಯುತ್ತದೆ. ಇದರಿಂದ ಜನರಿಗೆ ತೊಂದರೆಯಾಗುತ್ತದೆ. ಸಂಬಂಧಪಟ್ಟ ಇಲಾಖೆ ಈ ಬಗ್ಗೆ ಕೂಡಲೇ ಗಮನ ಹರಿಸಿ ಸಮಸ್ಯೆಯನ್ನು ಬಗರಹರಿಸಬೇಕು ಎಂದು ಸ್ಥಳೀಯರು ಒತ್ತಾಯಿಸಿದ್ದಾರೆ.