ಮೂಡಿಗೆರೆ : ನಿವೇಶನಕ್ಕಾಗಿ ಒತ್ತಾಯಿಸಿ ನಿವೇಶನ ರಹಿತರಿಂದ ಧರಣಿ…

81
firstsuddi

ಕೊಟ್ಟಿಗೆಹಾರ : ಕೂವೆ ಗ್ರಾ.ಪಂ ವ್ಯಾಪ್ತಿಯ ಗಬ್ಗಲ್‍ನ ಸರ್ವೆ ನಂಬರ್ 163ರಲ್ಲಿ ನಿವೇಶನ ರಹಿತರು ಟೆಂಟ್ ನಿರ್ಮಿಸಿ ನಿವೇಶನಕ್ಕಾಗಿ ಒತ್ತಾಯಿಸಿ ಇಂದು ಧರಣಿ ನಡೆಸಿದರು.

ಗಬ್ಗಲ್‍ನ ಸರ್ವೆ ನಂಬರ್ 163 ರಲ್ಲಿ ಗಿಡಗಂಟಿಗಳನ್ನು ಕಡಿದು ಟೆಂಟ್ ನಿರ್ಮಿಸಿ 200 ಕ್ಕೂ ಹೆಚ್ಚು ನಿವೇಶನ ರಹಿತರು ಧರಣಿ ನಡೆಸಿದರು. ಹಲವು ಬಾರಿ ನಿವೇಶನಕ್ಕಾಗಿ ಮನವಿ ಮಾಡಿದರೂ ಕೂಡ ಪ್ರಯೋಜನವಾಗಿಲ್ಲ. ಸರ್ಕಾರಿ ಭೂಮಿ ಉಳ್ಳವರ ಪಾಲಾಗುತ್ತಿದ್ದು ಒತ್ತುವರಿಯಾದ ಭೂಮಿಯನ್ನು ತೆರವುಗೊಳಿಸಿ ಬಡ ನಿವೇಶನ ರಹಿತರಿಗೆ ನೀಡಬೇಕು. ಸರ್ವೇ ನಂ 163 ಮತ್ತು 21 ರಲ್ಲಿ ನಿವೇಶನ ರಹಿತರಿಗೆ ನಿವೇಶನ ನೀಡಬೇಕು ಎಂದು ನಿವೇಶನ ರಹಿತರು ಆಗ್ರಹಿಸಿದರು.

ಸ್ಥಳಕ್ಕೆ ರಾಜಸ್ವ ನಿರೀಕ್ಷಕ ಕೃಷ್ಣಕುಮಾರ್ ಆಗಮಿಸಿ ನಿವೇಶನ ರಹಿತರ ಮಾತುಗಳನ್ನು ಆಲಿಸಿದರು. ನಂತರ ಮಾತನಾಡಿದ ಅವರು, ಸರ್ವೆ ನಂಬರ್ 163 ರಲ್ಲಿ ಗೋಮಾಳ ಹಾಗೂ ಅರಣ್ಯ ಇಲಾಖೆಯ ಜಾಗವಿದ್ದು ಕಂದಾಯ ಹಾಗೂ ಅರಣ್ಯ ಇಲಾಖೆಯಿಂದ ಜಂಟಿ ಸರ್ವೆ ನಡೆಸಿ ನಿವೇಶನರಹಿತರಿಗೆ ನಿವೇಶನ ನೀಡಲು ಕ್ರಮ ಕೈಗೊಳ್ಳಲಾಗುವುದು ಎಂದರು.

ಅಧಿಕಾರಿಗಳ ಭರವಸೆಯ ನಂತರ ಧರಣಿಯನ್ನು ತಾತ್ಕಾಲಿಕವಾಗಿ ಕೈ ಬಿಡಲಾಯಿತು. ವಾರದೊಳಗೆ ನಿವೇಶನ ನೀಡಲು ಮುಂದಾಗದಿದ್ದರೆ ಧರಣಿ ಮುಂದುವರಿಸುವುದಾಗಿ ನಿವೇಶನ ರಹಿತರು ತಿಳಿಸಿದರು.

ಈ ಸಂದರ್ಭದಲ್ಲಿ ಗ್ರಾಮ ಲೆಕ್ಕಾಧಿಕಾರಿ ಸರಿತಾ, ಕೂವೆ ಗ್ರಾ.ಪಂ ಸದಸ್ಯ ಶಿವರಾಜ್, ಸತೀಶ್, ರಾಜೇಶ್, ಸುಂದರೇಶ್, ನಿಡುವಾಳೆ ಗ್ರಾ.ಪಂ ಉಪಾಧ್ಯಕ್ಷ ನವೀನ್ ಹಾವಳಿ ಹಾಗೂ ನಿವೇಶನ ರಹಿತರು ಇದ್ದರು.