ಬೆಂಗಳೂರು: ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ನಾಳೆ ಬೆಂಗಳೂರಿಗೆ ಆಗಮಿಸಲಿದ್ದು, ಅವರನ್ನು ಸ್ವಾಗತಿಸಲು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ವಿಮಾನ ನಿಲ್ದಾಣಕ್ಕೆ ತೆರಳಲಿದ್ದಾರೆ ಎಂದು ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಇಂದು ನಗರದಲ್ಲಿ ಹೇಳಿದರು.
ವಿಧಾನ ಸೌಧದ ಬಳಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತಾಡಿದ ಅವರು, ಈ ಕಾರಣಕ್ಕಾಗೇ ಮಧ್ಯಾಹ್ನ ನಡೆಯಬೇಕಿದ್ದ ಕೆಪಿಸಿಸಿ ಸಭೆಯನ್ನು ಸಾಯಂಕಾಲಕ್ಕೆ ಮುಂದೂಡಲಾಗಿದೆ ಎಂದು ಹೇಳಿದರು.
ಮೂಲಗಳ ಪ್ರಕಾರ ಪ್ರಧಾನಿ ಮೋದಿ ಅವರು ನಾಳೆ ಮಧ್ಯಾಹ್ನ 2.10ಕ್ಕೆ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಆಗಮಿಸಲಿದ್ದು, 2.45 ಕ್ಕೆ ದೇವನಹಳ್ಳಿಯಲ್ಲಿ ಜಾಗತಿಕ ಏರೋಸ್ಪೇಸ್ ಬೋಯಿಂಗ್ ನೂತನ ಕ್ಯಾಂಪಸ್ ಉದ್ಘಾಟಿಸಲಿದ್ದಾರೆ. ಅದರ ಜೊತೆಗೆ ವಿಶ್ವದಲ್ಲೇ ಅತಿದೊಡ್ಡದು ಎನ್ನಲಾಗಿರುವ ಹೈ-ಟೆಕ್ ಏರೋಸ್ಪೇಸ್ ಪಾರ್ಕನ್ನು ಪ್ರಧಾನಿಯವರು ಲೋಕಾರ್ಪಣೆ ಮಾಡಲಿದ್ದಾರೆ.
ರಾಜ್ಯ ಬಿಜೆಪಿ ಘಟಕ ಪ್ರಧಾನಿ ಮೋದಿ ಆಗಮನ ದೃಷ್ಟಿಯಲ್ಲಿಟ್ಟುಕೊಂಡು ಒಂದು ರೋಡ್ ಶೋ ಆಯೋಜಿಸುವ ಯೋಚನೆ ಮಾಡಿತ್ತು. ಆದರೆ ಸರ್ಕಾರಿ ಕೆಲಸದ ನಿಮಿತ್ತ ಆಗಮಿಸುತ್ತಿರುವುದರಿಂದ ಅದರ ಅವಶ್ಯಕತೆಯಿಲ್ಲವೆಂದು ಅವರು ಹೇಳಿದ್ದಾರೆನ್ನಲಾಗಿದೆ. ಅಲ್ಲದೆ ಅವರು ಕೂಡಲೇ ಚೆನೈಗೆ ತೆರಳಬೇಕಿರುವುದರಿಂದ ಸಮಯದ ಅಭಾವ ಕೂಡ ಇದೆ ಎಂದರು.










