ಮೈಸೂರು: ರಾಜಕೀಯದಲ್ಲಿ ವಿಲನ್ ಅಂತ ಇದ್ದರೆ ಅದು ಮಿಸ್ಟರ್ ಕುಮಾರಸ್ವಾಮಿ ಎಂದು ಸಿಎಂ ಸಿದ್ದರಾಮಯ್ಯ ಅವರು ಹೆಚ್ಡಿ ಕುಮಾರಸ್ವಾಮಿ ವಿರುದ್ಧ ಕಿಡಿಕಾರಿದ್ದಾರೆ.
ಈ ಕುರಿತು ಮೈಸೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ವಿಧಾನಸಭೆಯಲ್ಲಿ ಬಿಜೆಪಿ ಅವರೇ ಸರ್ಕಾರ ಬೀಳಿಸಿದ್ದು ಅಂತಾ ಹೇಳಿದ್ದರು. ಇದು ರೆಕಾರ್ಡ್ ಆಗಿದೆ. ಅಸೆಂಬ್ಲಿ ರೆಕಾರ್ಡ್ ಬೇಕಾದರೆ ಬಿಡುಗಡೆ ಮಾಡುತ್ತೇನೆ. ಸಚಿವರು, ಶಾಸಕರನ್ನು ಭೇಟಿ ಮಾಡದೆ ಹೋಟೆಲ್ನಲ್ಲಿ ಕೂತು ಈಗ ನನ್ನ ಮೇಲೆ ಆರೋಪ ಮಾಡುತ್ತಾರೆ. ರಾಜಕೀಯವಾಗಿ ಹತಾಶರಾಗಿ ಬಾಯಿಗೆ ಬಂದ ರೀತಿ ಮಾತಾಡಿದ್ದಾರೆ. ಬಿಜೆಪಿಯವರು ಹತಾಶರಾಗಿದ್ದಾರೆ. ಬಿಜೆಪಿಗಿಂತಾ ಕುಮಾರಸ್ವಾಮಿ ಜಾಸ್ತಿ ಹತಾಶರಾಗಿದ್ದಾರೆ. ಬಿಜೆಪಿ, ಜೆಡಿಎಸ್ದು ಹೆಳವರು, ಕುರುಡರ ಕಥೆ ಆಗಿದೆ. ಇವರು ಅವರ ಮೇಲೆ ಅವರು ಇವರ ಮೇಲೆ ಡಿಪೆಂಡ್ ಆಗಿದ್ದಾರೆ. ಖಾಲಿ ಡಬ್ಬ ಮಾತ್ರ ಶಬ್ದ ಜಾಸ್ತಿ ಮಾಡುತ್ತೆ. ತುಂಬಿದ ಕೊಡ ತುಳುಕುವುದಿಲ್ಲ ಎಂದು ಹರಿಹಾಯ್ದರು.
ರಾಮನಗರ ವಿಚಾರದ ಕುರಿತು ಪ್ರತಿಕ್ರಿಯಿಸಿದ ಅವರು, ರಾಮನಗರ ವಿಚಾರ ಅವರನ್ನೇ ಕೇಳಿ. ನನಗೆ ಅದು ಗೊತ್ತಿಲ್ಲ. ನನ್ನ ಜೊತೆ ಅವರು ಚರ್ಚೆ ಮಾಡಿಲ್ಲ. ನನಗೆ ಅವರ ಮೈಂಡ್ನಲ್ಲಿ ಏನಿದೆ ಎಂಬುದು ಗೊತ್ತಿಲ್ಲ. ಗೊತ್ತಿಲ್ಲದ ವಿಚಾರದ ಬಗ್ಗೆ ಹೆಚ್ಚಾಗಿ ಮಾತನಾಡುವುದಿಲ್ಲ ಎಂದರು.
ಇದರೊಂದಿಗೆ ಇದೀಗ ಡಿಸಿಎಂ ಡಿಕೆ ಶಿವಕುಮಾರ್ ಹಾಗೂ ಸಿಎಂ ಸಿದ್ದರಾಮಯ್ಯ ನೇರವಾಗಿ ಕುಮಾರಸ್ವಾಮಿ ವಿರುದ್ಧ ವಾಗ್ದಾಳಿ ಆರಂಭಿಸಿದಂತಾಗಿದೆ.
ಕನಕಪುರ ತಾಲೂಕನ್ನು ಬೆಂಗಳೂರಿಗೆ ಸೇರ್ಪಡೆ ಮಾಡುವ ವಿಚಾರವಾಗಿ ಡಿಕೆ ಶಿವಕುಮಾರ್ ನೀಡಿದ್ದ ಹೇಳಿಕೆಗೆ ಕುಮಾರಸ್ವಾಮಿ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದರು. ಕುಮಾರಸ್ವಾಮಿ ರಾಮನಗರ ಜಿಲ್ಲೆ ಸ್ಥಾಪನೆ ಮಾಡಿದ್ದು ರಾಜಕೀಯವಾಗಿ ಹೆಸರು ಗಳಿಸಲು ಎಂದೂ ಡಿಕೆ ಹೇಳಿದ್ದು ಅವರನ್ನು ಕೆರಳಿಸಿತ್ತು. ಕುಮಾರಸ್ವಾಮಿ ವಾಗ್ದಾಳಿ ಬೆನ್ನಲ್ಲೇ ಇದೀಗ ಡಿಕೆ ಶಿವಕುಮಾರ್ ಸಹ ತಿರುಗೇಟು ನೀಡಿದ್ದಾರೆ.
ನನಗೆ ಯಾಕೆ ಡಿಕೆ ಎಂದು ಹೆಸರಿಟ್ಡಿದ್ದಾರೆ, ಅವರದ್ದು (ಕುಮಾರಸ್ವಾಮಿ) ಯಾಕೆ ಹೆಚ್ಡಿಕೆ ಅಂತಾ ಇದೆ? ಅಂದರೆ, ನನ್ನದು ಕನಕಪುರ, ಅವರದ್ದು ಹಾಸನ ಎಂದು ಹೇಳುವ ಮೂಲಕ ಡಿಕೆ ಶಿವಕುಮಾರ್ ನೇರ ವಾಗ್ದಾಳಿ ನಡೆಸಿದ್ದಾರೆ. ಈ ಮಧ್ಯೆ, ಸಿಎಂ ಸಿದ್ದರಾಮಯ್ಯ ಸಹ ಇದೀಗ ಕುಮಾರಸ್ವಾಮಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.










