ರಾಜ್ಯಪಾಲರು ಕನ್ನಡ ಕಡ್ಡಾಯ ನಾಮಫಲಕ ಸುಗ್ರೀವಾಜ್ಞೆಗೆ ಸಹಿ ಹಾಕಬೇಕು: ಡಿಕೆಶಿ ಒತ್ತಾಯ…

45
firstsuddi

ಬೆಂಗಳೂರು: ರಾಜ್ಯಪಾಲರು ಕನ್ನಡ ಕಡ್ಡಾಯ ನಾಮಫಲಕ ಸುಗ್ರೀವಾಜ್ಞೆಗೆ ಸಹಿ ಹಾಕಬೇಕು ಎಂದು ಡಿಸಿಎಂ ಡಿಕೆ ಶಿವಕುಮಾರ್ ಒತ್ತಾಯಿಸಿದ್ದಾರೆ.

ಕನ್ನಡ ಕಡ್ಡಾಯ ನಾಮಫಲಕ ಸುಗ್ರೀವಾಜ್ಞೆ ರಾಜ್ಯಪಾಲರು ವಾಪಸ್ ಕಳಿಸಿರೋ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಅವರು, ನಾವು ಅಧಿವೇಶನ ಘೋಷಣೆ ಮಾಡುವ ಮುಂಚೆ ಸುಗ್ರೀವಾಜ್ಞೆ ಮಾಡಿದ್ದೆವು. ದೇಶದ ರಕ್ಷಣೆ ವಿಚಾರ ಹೇಗೆ ಕಾಪಾಡುತ್ತೇವೋ ಅದೇ ರೀತಿ ರಾಜ್ಯದ ಗೌರದ ವಿಚಾರ ಇದು. ನಾವು ಅದಕ್ಕೆ 60% ಕನ್ನಡ ಇರಬೇಕು ಎಂದು, ಯಾವುದೇ ಗೊಂದಲ ಇರಬಾರದು ಎಂದು ಸುಗ್ರೀವಾಜ್ಞೆ ಹೊರಡಿಸಿದ್ದೆವು. ಅಸ್ಮಿತೆ, ಸ್ವಾಭಿಮಾನ, ಭಾಷೆ, ಸಂಸ್ಕೃತಿ ರಕ್ಷಣೆ ಮಾಡುವುದು ನಮ್ಮ ಕರ್ತವ್ಯ. ಅ ದೃಷ್ಟಿಯಿಂದ ಗಲಾಟೆ, ಚಳವಳಿ ನಡೆಯುತ್ತಿತ್ತು. ಹೀಗಾಗಿ ಕನ್ನಡ ಕಡ್ಡಾಯ ಎಂದು ಮಾಡಿದ್ದೇವೆ ಎಂದರು.

ರಾಜ್ಯಪಾಲರು ಯಾಕೆ ವಾಪಸ್ ಕಳಿಸಿದ್ರೋ ಗೊತ್ತಿಲ್ಲ. ಇದರ ಬಗ್ಗೆ ಮಾಹಿತಿ ಪಡೆದುಕೊಳ್ಳುತ್ತೇನೆ. ಸುಗ್ರೀವಾಜ್ಞೆಯನ್ನು ನಾವು ಅಧಿವೇಶನದಲ್ಲಿ ಪಾಸ್ ಮಾಡುತ್ತೇವೆ. ರಾಜ್ಯಪಾಲರು ಅಧಿವೇಶನದವರೆಗೆ ಕಾಯಬಾರದು. ಅಧಿವೇಶನದಲ್ಲಿ ನಾವು ಪಾಸ್ ಮಾಡೇ ಮಾಡ್ತೀವಿ. ಸರ್ಕಾರದ ಪರವಾಗಿ ಅಪೀಲ್ ಮಾಡುತ್ತೇನೆ. ಯಾರು ಇದಕ್ಕೆ ವಿರೋಧ ಮಾಡುತ್ತಿಲ್ಲ. ಯಾಕೆ ರಾಜ್ಯಪಾಲರು ವಿರೋಧ ಮಾಡಿದ್ರೋ ಗೊತ್ತಿಲ್ಲ. ಕರ್ನಾಟಕದಲ್ಲಿ ಇದ್ದೀರಿ. ಕರ್ನಾಟಕದಲ್ಲಿ ರಾಜ್ಯಪಾಲರು ಆಗಿದ್ದೀರಿ. ಇದೊಂದು ಭಾವನಾತ್ಮಕ ವಿಚಾರ. ಈ ವಿಚಾರವಾಗಿ ಸರ್ಕಾರದಲ್ಲಿ ನೀವು ತಪ್ಪು ಕಂಡು ಹಿಡಿಯಬಾರದು ಎಂದು ಮನವಿ ಮಾಡಿದರು.

ಸುಗ್ರೀವಾಜ್ಞೆಗೆ ನಾಗರಿಕರು ಯಾರಾದ್ರು ವಿರೋಧ ಮಾಡಿದ್ದಾರಾ? ಯಾರಾದ್ರು ಪಕ್ಷದವರು ವಿರೋಧ ಮಾಡಿದ್ದಾರಾ? ಯಾರೂ ವಿರೋಧ ಮಾಡಲ್ಲ. ಹೀಗಾಗಿ ರಾಜ್ಯಪಾಲರು ಸುಗ್ರೀವಾಜ್ಞೆ ವಾಪಸ್ ಕಳಿಸಿರೋ ಬಗ್ಗೆ ಮರುಚಿಂತನೆ ಮಾಡಿ ಸಹಿ ಹಾಕಬೇಕು ಎಂದು ಒತ್ತಾಯಿಸಿದರು.