ಮೈಸೂರು: ಎಚ್ಡಿ ಕುಮಾರಸ್ವಾಮಿ ಅವರಿಗೆ ರಾಧಿಕಾ ಕುಮಾರಸ್ವಾಮಿ ‘ಕರಿಯಾ’ ಅಂದ್ರೆ ಓಕೆ. ಆದರೆ, ಸಚಿವ ಜಮೀರ್ ಹೇಳಿದರೆ ಯಾಕೆ ಅಂತಾರೆ ಎಂದು ಕಾಂಗ್ರೆಸ್ ನಾಯಕಿ ತೇಜಸ್ವಿನಿ ಗೌಡ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. ಮೈಸೂರು ನಗರ ಹಾಗೂ ಗ್ರಾಮಾಂತರ ಕಾಂಗ್ರೆಸ್ ಸಮಿತಿ ವತಿಯಿಂದ ಕಾಂಗ್ರೆಸ್ ಭವನದಲ್ಲಿಮಂಗಳವಾರ ಆಯೋಜಿಸಿದ್ದ ಮಾಜಿ ಪ್ರಧಾನ ಮಂತ್ರಿ ಇಂದಿರಾಗಾಂಧಿ ಅವರ 107ನೇ ಜಯಂತ್ಯುತ್ಸವ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಚಂದ್ರಯಾನ, ಸೂರ್ಯಯಾನ, ಮಂಗಳಯಾನ ಹೋಗ್ತಿವಿ. ಆದರೂ, ಇಂದಿಗೂ ಅಸ್ಪೃಶ್ಯತೆ ಇದೆ ಎಂದರೆ ನಾಚಿಕೆಯಾಗಬೇಕು. ಕರಿಯಾ ಬಿಳಿಯಾ ಇವತ್ತು ಇದೆ. ಖಾಸಗಿ ವಾಹಿನಿಯ ಸಂದರ್ಶನದಲ್ಲಿ ನಿರೂಪಕರೊಬ್ಬರು ರಾಧಿಕಾ ಅವರಿಗೆ ಕುಮಾರಸ್ವಾಮಿಗೆ ” ನೀವು ಏನಂತಾ ಕರೆಯುತ್ತೀರಾ? ನಿಮಗೆ ಅವರು ಏನಂತಾ ಕರೆಯುತ್ತಾರೆ?” ಎಂದು ಪ್ರಶ್ನೆ ಮಾಡಿದರು. ಅದಕ್ಕೆ ರಾಧಿಕಾ ಅವರು “ಚಿನ್ನು ಅಂತಾರೆ” ನಾನು ಕರಿಯಾ ಎನ್ನುತ್ತೇನೆ ಎಂದಿದ್ದರು. ರಾಧಿಕಾ ಕುಮಾರಸ್ವಾಮಿ “ಕರಿಯಾ” ಅಂದ್ರೆ ಓಕೆ. ಆದರೆ, ಸಚಿವ ಜಮೀರ್ ಹೇಳಿದರೆ ಯಾಕೆ ಅಂತಾರೆ ಎಂದು ತೇಜಸ್ವಿನಿ ಗೌಡ ಪ್ರಶ್ನೆ ಮಾಡಿದರು. ಇಂದು ಬಿಜೆಪಿ ನಾಯಕರು ನೈಜ ಇತಿಹಾಸ ವನ್ನು ಮರೆಮಾಚಿ ತಮಗೆ ಬೇಕಾದ ರೀತಿ ಇತಿಹಾಸವನ್ನು ತಿರುಚಲು ನೋಡುತ್ತಿದ್ದಾರೆ. ಇದು ಅವರು ಕಾಣುತ್ತಿರುವ ಮೂರ್ಖತನದ ಹಗಲುಗನಸು ” ಎಂದು ತೇಜಸ್ವಿನಿ ಗೌಡ ಟೀಕಿಸಿದರು.










