ಬೆಂಗಳೂರು: ರಾಮೇಶ್ವರಂ ಕೆಫೆ ಬಾಂಬ್ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ಶಂಕಿತನ ಮಹತ್ವದ ಸುಳಿವು ಪತ್ತೆಯಾಗಿದೆ.
ಬಿಎಂಟಿಸಿ ಬಸ್ಸಿನಲ್ಲಿ ಹೂಡಿಗೆ ಬಂದಿದ್ದ ಆರೋಪಿ ಬಟ್ಟೆಯನ್ನು ಬದಲಾಯಿಸಿ ಟೋಪಿಯನ್ನು ಬಿಟ್ಟು ಹೋಗಿದ್ದಾನೆ ಎಂಬ ವಿಚಾರ ಸಿಸಿಬಿ ಮೂಲಗಳಿಂದ ತಿಳಿದು ಬಂದಿದೆ.
ಶಂಕಿತನದ್ದು ಎನ್ನಲಾದ ಟೋಪಿಯನ್ನು ಇದೀಗ ಎನ್ಐಎ ಅಧಿಕಾರಿಗಳು ವಶಕ್ಕೆ ತೆಗೆದುಕೊಂಡಿದ್ದಾರೆ. ಬಾಂಬ್ ಸ್ಟೋಟ ನಡೆದ ದಿನವಾದ ಮಾರ್ಚ್ 1 ರಂದು ಮಧ್ಯಾಹ್ನ 3 ಗಂಟೆಗೆ ಬೆಂಗಳೂರಿನಲ್ಲಿ ಬೀದರ್ಗೆ ಹೋಗುವ ಬಸ್ ಹತ್ತಿದ್ದಾನೆ. ಸಂಜೆ 4:30ಕ್ಕೆ ತುಮಕೂರಿನ ಕಳ್ಳಂಬೆಳ್ಳ ಟೋಲ್, ಸಂಜೆ 5 ಗಂಟೆಗೆ ಶಿರಾವನ್ನು ಬಸ್ ದಾಟಿದೆ. ಬಸ್ ಬಳ್ಳಾರಿಗೆ ತಲುಪಿದ ನಂತರ ಇಳಿದಿದ್ದಾನೆ. ಬೆಂಗಳೂರಿನಿಂದ ದೀರ್ಘ ಪ್ರಯಾಣ ಮಾಡಿದರೂ ಆತ ಯಾವುದೇ ನಿಲ್ದಾಣದಲ್ಲೂ ಇಳಿಯದೇ ಬಸ್ನಲ್ಲಿ ಕುಳಿತಿದ್ದ.
ಸದ್ಯ, ಶಂಕಿತ ತುಮಕೂರು ಮೂಲಕ ಬಳ್ಳಾರಿಗೆ ತೆರಳಿರುವ ಬಗ್ಗೆ ಅನುಮಾನ ವ್ಯಕ್ತವಾಗಿದೆ. ಅಲ್ಲಿಂದ ಬೀದರ್ನತ್ತ ಹೊರಟಿರುವುದಾಗಿ ಮಾಹಿತಿ ದೊರೆತಿದೆ. ಸದ್ಯ ಶಂಕಿತನ ಸ್ಪಷ್ಟವಾದ ಭಾವಚಿತ್ರ ಪೊಲೀಸರಿಗೆ ಲಭ್ಯವಾಗಿದೆ ಎನ್ನಲಾಗಿದೆ. ಆತ ಹಿಂದಿ ಮಾತನಾಡುತ್ತಿದ್ದ. ಹೀಗಾಗಿ ಆತ ಹೊರ ರಾಜ್ಯದವನಿರಬಹುದು ಎಂದು ಶಂಕಿಸಲಾಗಿದೆ.
ಈ ಮಧ್ಯೆ, ಬಿಎಂಟಿಸಿ ಬಸ್ನಲ್ಲಿ ಅಳವಡಿಸಲಾಗಿರುವ ಸಿಸಿಟಿವಿಯಲ್ಲಿ ಆರೋಪಿಯ ಚಿತ್ರ ಸೆರೆಯಾಗಿದೆ.










