ಚಿಕ್ಕಮಗಳೂರು: ಹಿರಿಯ ಛಾಯಾಗ್ರಾಹಕ, ಸಾಂಸ್ಕೃತಿಕ ಸಂಘದ ಅಧ್ಯಕ್ಷ ಎಂ.ಎಸ್. ಗಿರಿಧರ್ ಯತೀಶ್(63) ಅವರು ಇಂದು ನಗರದಲ್ಲಿ ನಿಧನರಾದರು.
ಕೆಲ ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಅವರು ಪತ್ನಿ, ಓರ್ವ ಪುತ್ರಿ ಸೇರಿದಂತೆ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ.
ಜಯಲಕ್ಷ್ಮಿ ಸ್ಟುಡಿಯೋ ಮಾಲೀಕರಾಗಿದ್ದ ಗಿರಿಧರ್ ಯತೀಶ್, ಕಳೆದ 35 ವರ್ಷಗಳಿಂದ ಅಂಗವಿಕಲರು ಮತ್ತು ಅಂದ ಮಕ್ಕಳಿಗೆ ಉಚಿತವಾಗಿ ಫೋಟೋ ತೆಗೆದುಕೊಡುತ್ತಿದ್ದರು. ರಾಜ್ಯಪ್ರಶಸ್ತಿಗೆ ಪಾತ್ರರಾಗಿದ್ದ ಅವರು ಡಾ. ರಾಜಕುಮಾರ್ ಸಂಘದ ಅಧ್ಯಕ್ಷರಾಗಿ,
ಛಾಯಾಗ್ರಾಹಕರ ಸಂಘದ ಜಿಲ್ಲಾಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದರು.
ಆಶಾಕಿರಣ ಅಂದ ಮಕ್ಕಳ ಶಾಲೆ, ಆಜಾದ್ ಪಾರ್ಕ್ ಗಣಪತಿ ಸೇವಾ ಸಮಿತಿ ಸೇರಿದಂತೆ ಅನೇಕ ಸಂಘ ಸಂಸ್ಥೆಗಳಲ್ಲಿ ಸಕ್ರಿಯವಾಗಿ
ಸೇವೆ ಸಲ್ಲಿಸುತ್ತಿದ್ದರು.
ಸುದ್ದಿ ತಿಳಿಯುತ್ತಿದ್ದಂತೆ ಶಾಸಕ ಎಚ್.ಡಿ. ತಮ್ಮಯ್ಯ, ಮಾಜಿ ಶಾಸಕ ಸಿ.ಟಿ.ರವಿ, ನಗರಸಭೆ ಅಧ್ಯಕ್ಷ ವರಸಿದ್ದಿ ವೇಣುಗೋಪಾಲ್ ಸೇರಿದಂತೆ ಅನೇಕ ಗಣ್ಯರು ಸಂಘ ಸಂಸ್ಥೆಗಳ ಮುಖಂಡರು ಅಭಿಮಾನಿಗಳು ಗಿರಿಧರ್ ಯತೀಶ್ ಅವರ ಮನೆಗೆ ತೆರಳಿ ಅಂತಿಮದರ್ಶನ ಪಡೆದರು.
ಉಪ್ಪಳ್ಳಿ ರಸ್ತೆಯ ಮುಕ್ತಿಧಾಮ ಚಿತಾಗಾರದಲ್ಲಿ ಸಂಜೆ ಅಂತ್ಯಕ್ರಿಯೆ ನಡೆಯಿತು. ಗಿರಿಧರ್ ಯತೀಶ್ ಅವರ ನಿಧನಕ್ಕೆ ಸಾಂಸ್ಕೃತಿಕ ಸಂಘ ತೀವ್ರ ಸಂತಾಪ ವ್ಯಕ್ತಪಡಿಸಿದೆ.










